ಚಿತ್ರದುರ್ಗ: ಹೇಳಿ ಕೇಳಿ ಆಂಧ್ರ-ಕರ್ನಾಟಕ ಗಡಿ ಭಾಗದ ಹಳ್ಳಿಗಳು ಅಭಿವೃದ್ದಿಯಿಂದ ವಂಚಿತವಾಗಿವೆ. ಆದ್ರೆ ರಸ್ತೆ ಇಲ್ಲದ ಗ್ರಾಮಕ್ಕೆ ಲೋಕೋಪಯೋಗಿ ಇಲಾಖೆ ಕಳೆದ ಎರಡು ವರ್ಷದ ಹಿಂದೆ ನೂತನ ರಸ್ತೆ ನಿರ್ಮಾಣ ಮಾಡಿತ್ತು. ಚಿತ್ರನಾಯಕನಹಳ್ಳಿಯಿಂದ ಬೋಗನಹಳ್ಳಿವರೆಗೆ ಡಾಂಬಾರು ರಸ್ತೆ ನಿರ್ಮಾಣ ಮಾಡಿತ್ತು. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಸ್ತೆ ಒಂದೇ ಮಳೆಗೆ ಕೊಚ್ಚಿ ಹೋಗಿದೆ. ಮಳೆಯಿಂದ ಹಾನಿಯಾಗಿ ಒಂದು ವರ್ಷ ಕಳೆದ್ರು ಕೂಡಾ PWD ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ. ಇನ್ನೂ ಅರ್ಧಕ್ಕೆ ಅರ್ಧ ರಸ್ತೆ ಕೊಚ್ಚಿ ನೀರಲ್ಲಿ ಹೋಗಿದ್ದು. ಇದ್ರಿಂದ ಇಲ್ಲಿನ ಜನ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿ ಸಂಚಾರ ಮಾಡುವ ವಾಹನ ಸವಾರರು ಜೀವ ಕೈಯಲ್ಲಿಡಿದು ಸಾಗುವಂತಾಗಿದ್ದು, ಲೋಕೋಪಯೋಗಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಇನ್ನೂ ಬೋಗನಹಳ್ಳಿಯಿಂದ ಆಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಪ್ರತಿದಿನ ಸಂಚಾರ ಮಾಡುತ್ತಿವೆ. ಆದ್ರೆ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚಾರ ಮಾಡುವುದೇ ದುಸ್ಥರವಾಗಿದೆ. ಯಾವುದೇ ರಸ್ತೆ ಸುರಕ್ಷತಾ ಬೋರ್ಡ್ಗಳು ಕೂಡಾ ಅಳವಡಿಸದೇ ನಿರ್ಲಕ್ಷ್ಯ ತೋರಿದ್ದು ಅಪಘಾತಕ್ಕೆ ಆಹ್ವಾನ ಎನ್ನುವಂತಿದೆ. ಅಲ್ಲದೆ ಹಲವು ಬಾರಿ ಅಪಘಾತಗಳು ಸಂವಿಸಿದ್ರು ಕೂಡಾ ಚಳ್ಳಕೆರೆ PWD ಇಲಾಖೆ ಅಧಿಕಾರಿಗಳು ಮಾತ್ರ ಜಾಣ ನಿದ್ರೆಗೆ ಜಾರಿದ್ದಾರೆ. ಇನ್ನೂ ಸ್ಥಳೀಯರು ಕೂಡಾ ಹಲವು ಬಾರಿ ಮನವಿ ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಅಂದಿಲ್ಲ.
ಒಟ್ಟಾರೆ ದಪ್ಪ ಚರ್ಮದ ಅಧಿಕಾರಿಗಳ ಹಣದ ದಾಹಕ್ಕೆ ಕೋಟಿ ಕೋಟಿ ವೆಚ್ಚದ ರಸ್ತೆ ನೀರಲ್ಲಿ ಕೊಚ್ಚಿ ಹೋಗಿದೆ. ಆದ್ರೆ ದೊಡ್ಡ ಅನಾಹುತಗಳು ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಿತ್ತೋಗಿರುವ ರಸ್ತೆಗೆ ಕಾಯಕಲ್ಪ ನೀಡಲಿ ಅನ್ನೋದು ನಮ್ಮ ಆಶಯ.
PublicNext
30/06/2025 09:39 pm