ಉಡುಪಿ: ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಜ್ಯುವೆಲರಿ ವರ್ಕ್ ಶಾಪ್ನಲ್ಲಿ ಸೋಮವಾರ ರಾತ್ರಿ ನಡೆದ ಕಳ್ಳತನದಿಂದಾಗಿ ಆಭರಣ ವ್ಯಾಪಾರಿಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ‘ರಿಫೈನರ್’ ಎಂಬ ಹೆಸರಿನ ಅಂಗಡಿಗೆ ನಕಲಿ ಬೀಗದ ಸಹಾಯದಿಂದ ಒಳನುಗ್ಗಿದ ಕಳ್ಳರು, ಡ್ರಾಯರ್ನ ಬೀಗವನ್ನು ಮುರಿದು ಚಿನ್ನದ ಗಟ್ಟಿ, ಗೋಲ್ಡ್ ಲಿಕ್ವಿಡ್ ಸೇರಿದಂತೆ ಸುಮಾರು 600 ಗ್ರಾಂ ತೂಕದ ಅಮೂಲ್ಯ ಲೋಹವನ್ನು ದೋಚಿದ್ದಾರೆ. ಇದರ ಮೌಲ್ಯ ಅಂದಾಜು 60 ಲಕ್ಷ ರೂಪಾಯಿಗಳಷ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಅಂಗಡಿಯಲ್ಲಿ ಮೊದಲು ಕೆಲಸ ಮಾಡಿದ್ದ ಕಾರ್ಮಿಕರೇ ಭಾಗಿಯಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಶಂಕಿತ ಕಾರ್ಮಿಕರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಹಾಗೂ ನಗರ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಳ್ಳರ ಗುರುತು ಪತ್ತೆಹಚ್ಚಲು ತಪಾಸಣೆ ಮುಂದುವರಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ನಗರದ ಅಕ್ಕಪಕ್ಕದ ಆಭರಣ ಅಂಗಡಿಗಳು ಭದ್ರತಾ ಕ್ರಮಗಳನ್ನು ಬಿಗಿಗೊಳಿಸುತ್ತಿವೆ. ವ್ಯಾಪಾರಿಗಳು ಕಳವು ಪ್ರಕರಣದಿಂದಾಗಿ ಆತಂಕಕ್ಕೊಳಗಾಗಿದ್ದು, ಸಾರ್ವಜನಿಕರಲ್ಲಿಯೂ ಭಯದ ವಾತಾವರಣ ಉಂಟಾಗಿದೆ. ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
09/09/2025 03:23 pm