ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಘಟನೆ ಸಂಬಂಧಿಸಿದಂತೆ ಇತ್ತೀಚೆಗೆ ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದಿದ್ದ ರಾಜ್ಯ ಸರ್ಕಾರ ಇದೀಗ ಇಬ್ಬರಿಗೆ ಹುದ್ದೆ ತೋರಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರನ್ನ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಇದೇ ಇಲಾಖೆಯ ಡಿಜಿಪಿಯಾಗಿದ್ದ ಮಾಲಿನಿ ಕೃಷ್ಣಮೂರ್ತಿ ಅವರು ನಿವೃತ್ತಿ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ದಯಾನಂದ ಅವರನ್ನ ನಿಯೋಜಿಸಿದೆ.
ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಶೇಕರ್ ಟೆಕ್ಕಣ್ಣನವರ ಅವರನ್ನ ನಗರ ಗುಪ್ತವಾರ್ತೆಯ ಡಿಸಿಪಿಯಾಗಿ ವರ್ಗಾವಣೆ ಮಾಡಿ ಗೃಹ ಇಲಾಖೆಯು ಆದೇಶ ಹೊರಡಿಸಿದೆ. ಮತ್ತೋರ್ವ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ಮುಂದುವರೆಸಲಾಗಿದೆ. ನಾಗರೀಕ ಹಕ್ಕು ಜಾರಿನಿರ್ದೇಶನಾಲಯ (ಡಿಸಿಆರ್ ಇ) ಎಡಿಜಿಪಿಯಾಗಿದ್ದ ಅರುಣ್ ಚಕ್ರವರ್ತಿ ಅವರನ್ನ ಪೊಲೀಸ್ ವಸತಿ ನಿಗಮದ ಎಂಡಿಯಾಗಿ ಬುಧವಾರ ವರ್ಗಾವಣೆ ಮಾಡಲಾಗಿತ್ತು.
ಆಡಳಿತಾತ್ಮಕ ಕಾರಣದ ಹಿನ್ನೆಲೆಯಲ್ಲಿ ಮಂಗಳವಾರ 18 ಮಂದಿ ಪಿಎಸ್ಐ ಹಾಗೂ 170 ಮಂದಿ ಎಎಸ್ಐಗಳನ್ನ ವರ್ಗಾವಣೆ ಮಾಡಲಾಗಿತ್ತು. ಇನ್ನೂ ಇಂದು ಡಿಜಿಪಿಯಾಗಿದ್ದ ಮಾಲಿನಿ ಕೃಷ್ಣಮೂರ್ತಿ ನಿವೃತ್ತಿ ಬೆನ್ನಲ್ಲೆ ರಾಜ್ಯದಲ್ಲಿ ಎರಡು ಡಿಜಿಪಿ ಹುದ್ದೆ ಖಾಲಿಯಾಗಿದ್ದು, ದಯಾನಂದ್ ಅವರ ಮೇಲೆ ಇಲಾಖೆ ತನಿಖೆ ಬಾಕಿ ಇರುವ ಹಿನ್ನಲೆಯಲ್ಲಿ ದಯಾನಂದ್ ಪದೋನ್ನತ್ತಿಗೆ ಬ್ರೇಕ್ ಬಿದ್ದಿದೆ.
PublicNext
31/07/2025 08:32 pm