ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಅತಿವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ರಭಸಕ್ಕೆ ಆಕೆ ದೂರಕ್ಕೆ ಹಾರಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ದಾಸರಗುಡ್ಡೆ ಎಂಬಲ್ಲಿ ನಡೆದಿದೆ. ಉಳ್ಳಾಲದ ಬೋಳಿಯಾರ್ ನಿವಾಸಿ ಭಾರತಿ(48)ಗಂಭೀರವಾಗಿ ಗಾಯಗೊಂಡವರು.
ಭಾರತಿ ಹಾಗೂ ಅವರ ಪುತ್ರಿ ದೀಪಶ್ರೀಯವರು ದಾಸರಗುಡ್ಡೆ ಎಂಬಲ್ಲಿನ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ರಸ್ತೆ ದಾಟುತ್ತಿದ್ದರು. ಈ ವೇಳೆ ಏಕಾಏಕಿ ಕಾರೊಂದು ಬಂದದ್ದನ್ನು ಗಮನಿಸಿ ಭಾರತಿಯವರು ವೇಗವಾಗಿ ರಸ್ತೆ ದಾಟಲು ಯತ್ನಿಸಿದರೂ ಅಷ್ಟರಲ್ಲಾಗಲೇ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಭಾರತಿಯವರು ದೂರಕ್ಕೆ ಎಸೆಯಲ್ಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತವಾದ ಕಾರು ಚಾಲಕ ಕೃಷ್ಣ ಶಾಮ್ಯರವರೇ ಗಾಯಾಳು ಭಾರತಿಯವರನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಭಾರತಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/04/2026 05:52 pm
LOADING...