ತುಮಕೂರು: ಅಂತರಸನಹಳ್ಳಿ APMC ಆವರಣದಲ್ಲಿ ಇರುವ ಹಣ್ಣು ಹೂವು ಮತ್ತು ತರಕಾರಿ ಮಾರ್ಕೆಟ್ ಗ್ಯಾಲ್ವನೈಸ್ಡ್ ಶೀಟ್ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹9 ಕೋಟಿ ಅನುದಾನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಅನುದಾನ ನಿಗದಿಯಾಗಿದ್ದು ಈ ಹಿನ್ನೆಲೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂತರಸನಹಳ್ಳಿ ಮಾರ್ಕೆಟ್ ಆವರಣದಲ್ಲಿ ಮಳೆ ಮತ್ತು ಬಿಸಿಲು ಬೀಳದಂತೆ ಗ್ಯಾಲ್ವನೈಸ್ಡ್ ಶೀಟ್ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ಆರಂಭಿಸಲು APMC ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ APMC ಕಾರ್ಯದರ್ಶಿ ಬಿ.ಎಲ್. ಕೃಷ್ಣಪ್ಪ ಅವರು, ಗ್ಯಾಲ್ವನೈಸ್ಡ್ ಶೀಟ್ ಅಳವಡಿಕೆ ಕಾಮಗಾರಿಗೆ ಮೊದಲು ರಾಜ್ಯ ಕಚೇರಿಯಿಂದ ವಿನ್ಯಾಸ (ಡಿಸೈನ್) ಅನುಮೋದನೆ ಪಡೆಯಬೇಕಿದ್ದು, ನಂತರ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗುವುದು ಹಾಗೂ ತಕ್ಷಣ ಸ್ಥಳದಲ್ಲೇ ಕಾಮಗಾರಿ ಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಮಿತಿಯ ಅನುದಾನ ಹಂಚಿಕೆಯಾಗಿದ್ದು ಯಾವುದೇ ಹಂತದಲ್ಲೂ ವಿಳಂಬವಾಗದಂತೆ ಅಗತ್ಯ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ, ರೈತ ಸಮುದಾಯಕ್ಕೆ ಉತ್ತಮ ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸ್ಥಳ ಪರಿಶೀಲನಾ ಸಂದರ್ಭದಲ್ಲಿ APMC ಕಾರ್ಯದರ್ಶಿ ಬಿ.ಎಲ್. ಕೃಷ್ಣಪ್ಪ ಸೇರಿದಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
28/04/2026 08:38 am