ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ ಬೃಹತ್ ಹಗರಣ ನಡೆಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರವಾಗಿ ಆರೋಪಿಸಿದ್ದಾರೆ.
ದೆಹಲಿ ಮೂಲದ ‘ಎಂಎಸ್ಡಬ್ಲ್ಯೂ ಸೆಲ್ಯೂಶನ್ಸ್ ಲಿಮಿಟೆಡ್’ (ರಾಮ್ಕಿ) ಕಂಪನಿಗೆ 35 ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ನೀಡಿ, ₹10 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಬುಧವಾರ ಬಿಜೆಪಿ ಮುಖಂಡರಾದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್ ಸೇರಿದಂತೆ ಶಾಸಕರು ಮತ್ತು ಇತರ ಮುಖಂಡರ ನಿಯೋಗದೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮತ್ತು ಲೋಕಾಯುಕ್ತಕ್ಕೆ ದಾಖಲೆಗಳ ಸಮೇತ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
ತನಿಖೆಗೆ ಆಗ್ರಹ
ಟೆಂಡರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತನಿಖೆಗೊಳಪಡಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಟೆಂಡರ್ ಪಡೆದ ಮತ್ತು ಅರ್ಜಿ ಸಲ್ಲಿಸಿದ ಕಂಪನಿಗಳ ಅರ್ಹತೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು, ಅಲ್ಲದೆ, ಡಿಪಿಆರ್ (ವಿವರವಾದ ಯೋಜನಾ ವರದಿ) ಹಂತ ಮತ್ತು ಟೆಂಡರ್ ಅನುಮೋದನೆ ಹಂತದಲ್ಲಿ ನಡೆದಿರುವ ಲೋಪಗಳ ಬಗ್ಗೆ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ ₹514 ಕೋಟಿ ಮತ್ತು ಸಂಸ್ಕರಣೆ ಮತ್ತು ವಿಲೇವಾರಿಗೆ ₹380 ಕೋಟಿ ಖರ್ಚು ಮಾಡಲಾಗುತ್ತಿದೆ. 11,000 ಪೌರಕಾರ್ಮಿಕರಿಗೆ ವರ್ಷಕ್ಕೆ₹ 444 ಕೋಟಿ ರೂ. ಸಂಬಳ ನೀಡಲಾಗುತ್ತಿದೆ. ಎಲ್ಲ ಸೇರಿ ಸೇರಿ ವರ್ಷಕ್ಕೆ ಒಟ್ಟು ₹1,344 ಕೋಟಿ ಖರ್ಚಾಗುತ್ತದೆ ಎಂದು ತಿಳಿಸಿದರು.
ಗುತ್ತಿಗೆ ಪ್ರಕ್ರಿಯೆಯಲ್ಲಿ ಅಕ್ರಮದ ಆರೋಪ
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸ್ವಚ್ಛತೆಯಲ್ಲಿ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಿಕ್ಕಿತ್ತು. ಈಗ ಬೆಂಗಳೂರು ಬೆಚ್ಚಿಬೀಳುವಂತಹ ಹಗರಣವನ್ನು ಕಾಂಗ್ರೆಸ್ ಸರ್ಕಾರ ಕಸದ ಹೆಸರಲ್ಲಿ ಮಾಡಿದೆ. ದೇಶದ ಇತಿಹಾಸದಲ್ಲಿ ಕಸದಲ್ಲಿ ಲೂಟಿ ಮಾಡಿರುವ ಹಗರಣ ಇದೇ ಮೊದಲು. ಇದು ಹೈಕಮಾಂಡ್ನ ಕಪ್ಪ ಕಾಣಿಕೆ ಟೆಂಡರ್ ಆಗಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ ₹514 ಕೋಟಿ ಮತ್ತು ಸಂಸ್ಕರಣೆ ಮತ್ತು ವಿಲೇವಾರಿಗೆ ₹380 ಕೋಟಿ ಖರ್ಚು ಮಾಡಲಾಗುತ್ತಿದೆ. 11,000 ಪೌರಕಾರ್ಮಿಕರಿಗೆ ವರ್ಷಕ್ಕೆ₹ 444 ಕೋಟಿ ರೂ. ಸಂಬಳ ನೀಡಲಾಗುತ್ತಿದೆ. ಎಲ್ಲ ಸೇರಿ ಸೇರಿ ವರ್ಷಕ್ಕೆ ಒಟ್ಟು ₹1,344 ಕೋಟಿ ಖರ್ಚಾಗುತ್ತದೆ ಎಂದು ತಿಳಿಸಿದರು.
ಜಿಬಿಎನಲ್ಲಿ ಈವರೆಗೆ ರಾಜ್ಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಹೊಸ ₹39,000 ಕೋಟಿ ಮೊತ್ತದ ಟೆಂಡರ್ ಅನ್ನು ದೆಹಲಿಯ ಕಂಪನಿಗೆ ನೀಡಲಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಟೆಂಡರ್ ಮಾಡುತ್ತಿದ್ದರೆ, ಈ ಬಾರಿ 30 ವರ್ಷ ಹಾಗೂ ಇನ್ನೂ ವಿಸ್ತರಣೆಯ ಅವಕಾಶದ 5 ವರ್ಷ ಸೇರಿ ಒಟ್ಟು 35 ವರ್ಷಕ್ಕೆ ದೆಹಲಿಯ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ ಅಥವಾ ರಾಮ್ಕಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣಕ್ಕೆ ಎರಡು ಪ್ಯಾಕೇಜ್ ಮಾಡಲಾಗಿದೆ. ಇದಕ್ಕೂ ಮುನ್ನ ಸರ್ಕಾರಿ ಸ್ವಾಮ್ಯದ ರೈಟ್ಸ್ ಕಂಪನಿಯಿಂದ ಸಲಹೆ ಪಡೆದು, ಆ ಸಲಹೆಯನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ಇದರ ಬದಲು ಮಾನ್ಯತೆ ಇಲ್ಲದ ಕಂಪನಿಗೆ ಸಲಹೆಗಾಗಿ ಅವಕಾಶ ನೀಡಲಾಗಿದೆ. ಈಗ ಕಸದ ಟೆಂಡರ್ ಅನ್ನು ಎಂಎಸ್ಡಬ್ಲ್ಯು ಕಂಪನಿಗೆ ನೀಡಿ, ₹1,500 ಕೋಟಿ ಸಾಲ ಪಡೆಯಲು ಕೂಡ ಅವಕಾಶ ಕೊಡಲಾಗಿದೆ. ಇದಕ್ಕೆ ಜಮೀನನ್ನು ಕೂಡ ಸರ್ಕಾರದಿಂದಲೇ ನೀಡಲಾಗಿದೆ ಎಂದರು.
ಸದ್ಯ ಪ್ರತಿ ಟನ್ಗೆ ಟಿಪ್ಪಿಂಗ್ ಶುಲ್ಕವಾಗಿ ₹260 ನೀಡಲಾಗುತ್ತಿದೆ. ಹೊಸ ಟೆಂಡರ್ನಂತೆ ₹2,400 ನೀಡುತ್ತಿದ್ದು, ಶೇ 950 ಅಧಿಕವಾಗಿದೆ. ಹಳೆ ವೆಚ್ಚದಲ್ಲೇ ಮುಂದುವರಿಸಿದರೆ 30 ವರ್ಷಕ್ಕೆ ₹6,117 ಕೋಟಿ ಆಗುತ್ತದೆ. ಹೊಸ ಟೆಂಡರ್ನಿಂದ ಈ ಖರ್ಚು ₹39,437 ಕೋಟಿ ಆಗುತ್ತಿದ್ದು, ಹೆಚ್ಚುವರಿಯಾಗಿ ₹33,320 ಕೋಟಿ ವೆಚ್ಚವಾಗುತ್ತದೆ. ಟೆಂಡರ್ ಪ್ರಕಾರ, ದಕ್ಷಿಣದ ಪ್ಯಾಕೇಜ್ನಲ್ಲಿ ಶೇ19.43 ಹಾಗೂ ಉತ್ತರದ ಪ್ಯಾಕೇಜ್ನಲ್ಲಿ ಶೇ19.25 ಅಧಿಕ ಮೊತ್ತ ನಮೂದಾಗಿದೆ. ಎರಡೂ ಪ್ಯಾಕೇಜ್ ಸೇರಿ ಒಟ್ಟಾಗಿ ಶೇ19.33 ಹೆಚ್ಚಿದೆ ಎಂದರು.
ಮೊದಲೆರಡು ಬಾರಿ ಟೆಂಡರ್ ಕರೆದು ವಿಫಲವಾಗಿ ಮೂರನೇ ಬಾರಿಗೆ ದೆಹಲಿಯ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ ಅಥವಾ ರಾಮ್ಕಿ ಕಂಪನಿಗೆ (ಮಾತೃ ಸಂಸ್ಥೆ) ನೀಡಲಾಗಿದೆ. ಟೆಂಡರ್ ಪರಿಶೀಲನೆಯನ್ನು ಅಧಿಕಾರಿಗಳ ತಂಡಕ್ಕೆ ನೀಡಿದ್ದರೂ ಅದನ್ನು ಸರಿಯಾಗಿ ಪರಿಶೀಲಿಸಿಲ್ಲ. ಈ ಟೆಂಡರ್ ಪ್ರಕಾರ, ಒಂದು ಟನ್ ಸಂಸ್ಕರಣೆಯ ಖರ್ಚು ಶೇ 430 ಹೆಚ್ಚಲಿದೆ. ಈಗ ಟನ್ಗೆ ₹2,151 ಆಗಿದ್ದರೆ, 30 ವರ್ಷದ ನಂತರ ₹9,297 ಆಗುತ್ತದೆ. ಕಾನೂನು ಪ್ರಕಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದ್ದರೂ, ಅದನ್ನು ಮಾಡದೆ ಅಕ್ರಮ ಎಸಗಲಾಗಿದೆ.
ಜಾಹೀರಾತು ರಹಿತ ಟೆಂಡರ್ ಮತ್ತು ಸಾಲ ಸೌಲಭ್ಯ
ಅಶೋಕ್ ಅವರ ಪ್ರಕಾರ, ಈ ಹಿಂದೆ ಎರಡು ಬಾರಿ ಟೆಂಡರ್ ಕರೆದು ವಿಫಲವಾಗಿದ್ದರೂ, ಮೂರನೇ ಬಾರಿಗೆ ದೆಹಲಿ ಮೂಲದ ರಾಮ್ಕಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಮಾನ್ಯತೆ ಇಲ್ಲದ ಕಂಪನಿಯಿಂದ ಸಲಹೆ ಪಡೆದು, ಇದೇ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಈ ಕಂಪನಿಗೆ ₹1,500 ಕೋಟಿ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಮತ್ತು ಅದಕ್ಕೆ ಸರ್ಕಾರದಿಂದಲೇ ಜಮೀನು ನೀಡಲಾಗಿದೆ. ಕಾನೂನು ಪ್ರಕಾರ ಟೆಂಡರ್ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡದೆ ಅಕ್ರಮ ಎಸಗಲಾಗಿದೆ ಎಂದು ಅವರು ಆರೋಪಿಸಿದರು.
ಹಣಕಾಸು ಇಲಾಖೆಯಿಂದ ಎಚ್ಚರಿಕೆ
ಹಣಕಾಸು ಇಲಾಖೆಯು ಈ ಗುತ್ತಿಗೆ ಪ್ರಕ್ರಿಯೆಯಲ್ಲಿನ ಹಲವು ಅಂಶಗಳ ಬಗ್ಗೆ ತಕರಾರು ಎತ್ತಿತ್ತು. ಎರಡೂ ಪ್ಯಾಕೇಜ್ಗಳನ್ನು ಒಂದೇ ಕಂಪನಿಗೆ 30 ವರ್ಷಗಳ ದೀರ್ಘಾವಧಿಗೆ ನೀಡಿರುವುದು ಸರಿಯಲ್ಲ ಎಂದು ಇಲಾಖೆ ಆಕ್ಷೇಪಿಸಿತ್ತು. ಅವಧಿಯನ್ನು 10 ವರ್ಷಕ್ಕೆ ಇಳಿಸಿ, ಹೆಚ್ಚಿನ ಮೊತ್ತವನ್ನು ಶೇ.2.5ಕ್ಕೆ ಇಳಿಸಬೇಕು, ಇಲ್ಲವಾದರೆ ಬಿಬಿಎಂಪಿಗೆ ಮುಂದೆ ಭಾರಿ ಹೊರೆಯಾಗುತ್ತದೆ ಎಂದು ಸಲಹೆ ನೀಡಿತ್ತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಇದರಲ್ಲಿನ ಲೋಪಗಳನ್ನು ಎತ್ತಿ ತೋರಿಸಿದ್ದರೂ, ಈ ಗುತ್ತಿಗೆಯನ್ನು ಅನುಮೋದಿಸಲಾಗಿದೆ ಎಂದು ಆರ್. ಅಶೋಕ್ ತಿಳಿಸಿದರು.
ಕಪ್ಪುಪಟ್ಟಿಯಲ್ಲಿರುವ ಕಂಪನಿಗೆ ಗುತ್ತಿಗೆ
ಗುತ್ತಿಗೆ ಪಡೆದ ರಾಮ್ಕಿ ಕಂಪನಿಯು ವಂಚನೆ ಮಾಡಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದ್ದು, ಅದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಅಶೋಕ್ ಸ್ಫೋಟಕ ಮಾಹಿತಿ ನೀಡಿದರು. 2016ರಲ್ಲಿ ಬಿಬಿಎಂಪಿಯೇ ರಾಮ್ಕಿ ಕಂಪನಿಯ ಗುತ್ತಿಗೆಯನ್ನು ರದ್ದುಪಡಿಸಿತ್ತು. ಆದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಇದೇ ಕಂಪನಿಗೆ ಟೆಂಡರ್ ನೀಡಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟದಲ್ಲಿ ಸಚಿವರ ವಿರೋಧದ ನಡುವೆಯೂ ಅನುಮೋದನೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಮುನ್ನ ಈ ಗುತ್ತಿಗೆ ವಿಚಾರವನ್ನು ಸಂಪುಟಕ್ಕೆ ತಂದು ಅನುಮೋದಿಸಲಾಗಿದೆ ಎಂದು ಅಶೋಕ್ ಆರೋಪಿಸಿದರು. ಸಂಪುಟ ಸಭೆಯಲ್ಲಿ ಹತ್ತು ಮಂದಿ ಸಚಿವರು ಈ ಗುತ್ತಿಗೆಯನ್ನು ವಿರೋಧಿಸಿ ಗಲಾಟೆ ಮಾಡಿದ್ದರು. ಇದು ಬೆಂಗಳೂರು ಚುನಾವಣೆಗೆ ಸಮಸ್ಯೆಯಾಗಲಿದೆ ಎಂದು ಅವರು ಹೇಳಿದ್ದರೂ, 'ಹೈಕಮಾಂಡ್ನ ಸೂಚನೆ' ಎಂದು ಹೇಳಿ ಗುತ್ತಿಗೆಯನ್ನು ಅನುಮೋದಿಸಲಾಗಿದೆ ಎಂದು ಅಶೋಕ್ ಹೇಳಿದರು.
ಗುತ್ತಿಗೆ ರದ್ದುಗೊಳಿಸಲು ಒತ್ತಾಯ
"ಕಸದಲ್ಲೂ ಕಾಸು ತೆಗೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಅಕ್ರಮದ ವಾಸನೆ ಹರಡಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಹೊಣೆ ವಹಿಸಿಕೊಳ್ಳಲು ಸಚಿವರ ಮಧ್ಯೆ ಸ್ಪರ್ಧೆ ನಡೆದಿದೆ. ಕೂಡಲೇ ಈ ಟೆಂಡರ್ ರದ್ದು ಮಾಡಬೇಕು" ಎಂದು ಅಶೋಕ್ ಒತ್ತಾಯಿಸಿದರು.
PublicNext
11/06/2026 09:28 am