ನಂಜನಗೂಡು: ತಾಲ್ಲೂಕಿನ ಹದಿನಾರು ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ತುರ್ತು ಪರಿಸ್ಥಿತಿಗೆ 50 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ “ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ” ಎಂಬ ವಿಚಾರ ಸಂಕಿರಣವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಈ ವಿಚಾರ ಸಂಕಿರಣವನ್ನು ಬಿಜೆಪಿ ನೂತನ ಜಿಲ್ಲಾ ಅಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎನ್. ಮಹೇಶ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಸ್. ಬಾಲರಾಜು, ಹರ್ಷವರ್ಧನ್ ಉಪಸ್ಥಿತರಿದ್ದರು.
ಕಾರ್ಯಕ್ರಮವು ಸ್ನೇಹಪೂರ್ವಕವಾಗಿ ಕನ್ನಡತಾಯಿ, ಸಂವಿಧಾನ ಪೀಠಿಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗುವ ಮೂಲಕ ಆರಂಭವಾಯಿತು.
ಮಾಜಿ ಸಚಿವ ಎನ್. ಮಹೇಶ್ ಅವರು ಮಾತನಾಡುತ್ತಾ, "ತುರ್ತು ಪರಿಸ್ಥಿತಿ ಇಂದಿರಾ ಗಾಂಧಿಯ ಅಧಿಕಾರದ ದಾಹದ ಪರಿಣಾಮ. ದೇಶಕ್ಕೆ ಲಾಭವಾಗದೆ, ಅವರ ಕುಟುಂಬಕ್ಕಷ್ಟೇ ಲಾಭವಾಗಿದೆ," ಎಂದು ಕಿಡಿಕಾರಿದರು. "ಇದು ಕಾಂಗ್ರೆಸ್ ನಾಯಕತ್ವದ ಡಿಎನ್ಎದಲ್ಲಿಯೇ ಇದೆ" ಎಂದು ಕಿಡಿ ಕಾರಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು "ಸಿದ್ದು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಶೋಕಿವಾಲನಾಗಿ ಮಾತ್ರ ಇದ್ದರು. ಸಂವಿಧಾನ ಉಳಿದಿದ್ದರೆ ಅದು ಆರ್ಎಸ್ಎಸ್ನ ಶ್ರೇಯ," ಎಂದು ಬಿಂಬಿಸಿದರು.
ಇದೇ ಸಂದರ್ಭ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜೈಲುವಾಸ ಅನುಭವಿಸಿದ ಹಲವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಾಲರಾಜು, ಹರ್ಷವರ್ಧನ್, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಪ್ಪಗೌಡ, ಜಿಲ್ಲಾ ಬಿಜೆಪಿ ಗ್ರಾಮಾಂತರ ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮಂಡಲ ಅಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸದನಾಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರು, ಮಹಿಳಾ ಮೋರ್ಚಾದ ಪ್ರಫುಲ್ಲಾ ಮಲ್ಲಾಡಿ, ಹಿರಿಯ ಮುಖಂಡರಾದ ಪುಟ್ಟಬುದ್ದಿ ಸೇರಿದಂತೆ ಇತರೇ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
PublicNext
28/06/2025 10:28 pm