ಬೆಂಗಳೂರು : ತಂದೆ ಕನಸು ನೆರವೇರಿಸಿ, ನೂರಾರು ಜನರ ಆಶೀರ್ವಾದ ಪಡೆದ ಜಿಮ್ ರವಿ. ಕೋಲಾರ ಮೂಲದ ಎ.ವಿ. ರವಿ, ಜನರಿಗೆ ಜಿಮ್ ರವಿ ಎಂಬ ಹೆಸರಿನಿಂದ ಪರಿಚಿತರು. ಅವರು ದೇಶ ಹಾಗೂ ವಿದೇಶಗಳಲ್ಲಿ ಹೆಸರು ಪಡೆದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು. ಮಿಸ್ಟರ್ ಇಂಡಿಯಾ ಮತ್ತು ಕರ್ನಾಟಕದ ಏಕಲವ್ಯ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ಪುರುಷೋತ್ತಮ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು.ಚಿತ್ರರಂಗದ ಪ್ರಖ್ಯಾತಿಯ ಹೊರತಾಗಿಯೂ, ರವಿ ಅವರು ಸಮಾಜಮುಖಿ ಕೆಲಸಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ. ಆದರೆ ಅವರು ಯಾವತ್ತೂ ತಮ್ಮ ಸಾಮಾಜಿಕ ಕಾರ್ಯಗಳಿಗೆ ಪ್ರಚಾರ ಇಷ್ಟಪಡುವ ವ್ಯಕ್ತಿಯಾಗಿಲ್ಲ.
ಇತ್ತೀಚೆಗೆ ಅವರು ಮಾಡಿದ ಒಂದು ಕೆಲಸ ಅನೇಕರ ಮನಗೆದ್ದಿದೆ. ಅವರ ತಂದೆಗೆ ಜೀವನದಲ್ಲಿ ಕಾಶಿಯಾತ್ರೆ ಮಾಡಲು ಆಸೆ ಇತ್ತು. ಆದರೆ ಕೆಲ ಕಾರಣಗಳಿಂದಾಗಿ ಆ ಆಸೆ ಪೂರ್ಣವಾಗಲಿಲ್ಲ. ತಂದೆಯ ಕನಸು ನೆರವೇರಿಸಲಿಲ್ಲ ಎಂಬ ವಿಷಾದ ರವಿಯವರ ಮನಸ್ಸಿನಲ್ಲಿ ಉಳಿದಿತ್ತು.ಅದು ನೆನೆಸಿ ರವಿ ಅವರು ಹದಿನಾಲ್ಕು ವರ್ಷಗಳ ಹಿಂದೆ ಒಂದು ನಿರ್ಧಾರ ಮಾಡಿಕೊಂಡರು – ಅಪ್ಪನ ಹೆಸರಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಜನ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸಬೇಕುbಎಂದು. ಈಗ ಅವರು ಆ ಸಂಕಲ್ಪವನ್ನು ಎಳ್ಳುಚುಕ್ಕದಂತೆ ನೆರವೇರಿಸಿದ್ದಾರೆ.
ರವಿ ಅವರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಆಯ್ದ 101 ಅಶಕ್ತ ಯಾತ್ರಾರ್ಥಿಗಳಿಗೆ ವಿಮಾನದ ಮೂಲಕ ಕಾಶಿಯಾತ್ರೆ ಮಾಡಿಸಿದ್ದಾರೆ. ಅವರ ಊರುಗಳಿಂದ ಬೆಂಗಳೂರಿಗೆ ವಾಹನ ವ್ಯವಸ್ಥೆ, ವಿಮಾನ ನಿಲ್ದಾಣದಲ್ಲಿ ಉಪಹಾರ, ಹೊಸ ಬಟ್ಟೆ, ಅಯೋಧ್ಯೆ, ಕಾಶಿ, ಗಂಗಾ ಆರತಿ, ಪಿಂಡಪ್ರದಾನ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಅತ್ಯುತ್ತಮ ವ್ಯವಸ್ಥೆ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರದಿಂದ ವಿಶೇಷ ದರ್ಶನದ ವ್ಯವಸ್ಥೆ, ಕಾಶಿಯ ಜಂಗಮವಾಡಿ ಮಠದಲ್ಲಿ ವಾಸ್ತವ್ಯ, ವಿಶೇಷ ಆಹಾರ ವ್ಯವಸ್ಥೆ, ಶಾಪಿಂಗ್ಗೆ ಹಣ ಇವೆಲ್ಲವೂ ಸಜ್ಜಾಗಿ ಏರ್ಪಡಿಸಲಾಯಿತು.
PublicNext
21/07/2025 01:05 pm