ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಇಲ್ಲವೇ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು, ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ನೇತೃತ್ವದಲ್ಲಿ ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
‘ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ, ಇಲ್ಲವೇ ಪ್ರತ್ಯೇಕ ರಾಜ್ಯ ನೀಡಿ’ ಎಂದು ಆಗ್ರಹಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ, ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ದಿನವಿಡೀ ಧರಣಿ ನಡೆಸಿದವು. ಡಿಸೆಂಬರ್ 12ರಂದು ಸದನದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮಂಡಿಸಿದ್ದ ಶಾಸಕರು, ಇದೀಗ ಬೀದಿಗಿಳಿದು ಹೋರಾಟಕ್ಕೆ ಇಳಿದಿದ್ದಾರೆ.
ಶಾಸಕರ ಆಕ್ರೋಶ ಮತ್ತು ಸವಾಲು
‘ಕರ್ನಾಟಕ ಏಕೀಕರಣವಾದಾಗಿನಿಂದಲೂ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರವೂ ಇದೇ ಚಾಳಿಯನ್ನು ಮುಂದುವರಿಸಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸರ್ಕಾರ ಅನ್ಯಾಯ ಎಸಗುತ್ತಿದೆ’ ಎಂದು ಭರಮಗೌಡ ಕಾಗೆ ನೇರ ವಾಗ್ದಾಳಿ ನಡೆಸಿದರು. ‘ಸದನದಲ್ಲಿ ನಾನು ಪ್ರತ್ಯೇಕ ರಾಜ್ಯದ ವಾದವನ್ನು ಮಂಡಿಸಿದ್ದೇನೆ, ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇನ್ನು ಸುಮ್ಮನೆ ಕೂರುವುದಿಲ್ಲ. ಉತ್ತರ ಕರ್ನಾಟಕದಾದ್ಯಂತ ಸಂಚರಿಸಿ ಶಾಸಕರು ಮತ್ತು ಜನರನ್ನು ಜಾಗೃತಗೊಳಿಸುತ್ತೇನೆ. ನನ್ನ ಮೇಲೆ ಯಾರು ಏನೇ ಕ್ರಮ ಕೈಗೊಂಡರೂ ಎದುರಿಸಲು ನಾನು ಸಿದ್ಧ’ ಎಂದು ಸವಾಲು ಹಾಕಿದರು.
ಪ್ರಮುಖ ಬೇಡಿಕೆಗಳು
ಪ್ರತಿಭಟನಾಕಾರರು ಸಲ್ಲಿಸಿದ ಮನವಿಪತ್ರದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ. ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು, ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕನಿಷ್ಠ 10 ಕಚೇರಿಗಳನ್ನು ಸ್ಥಳಾಂತರಿಸಬೇಕು ಹಾಗೂ ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಹೋರಾಟ ಮುಂದುವರಿಕೆಯ ಎಚ್ಚರಿಕೆ
‘ಚಳಿಗಾಲದ ಅಧಿವೇಶನದಲ್ಲಿ ಈ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ನಿರ್ಣಯ ಕೈಗೊಳ್ಳದಿದ್ದರೆ, ಜನವರಿ 1ರಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಎಚ್ಚರಿಕೆ ನೀಡಿದರು. ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ, ವಕೀಲ ಡಿ.ಬಿ.ಹಿರೇಮಠ, ಮುಖಂಡರಾದ ವಿಲನ್ಕುಮಾರ ತಾರಿಹಾಳ, ಸುಭಾಷ ಸಿರಬೂರ ಸೇರಿದಂತೆ ಹಲವರು ಈ ಮನವಿಗೆ ಸಹಿ ಹಾಕಿದರು.
PublicNext
18/12/2025 07:28 am