ತುಮಕೂರು: ತಾಲ್ಲೂಕಿನ ಹೆಬೂರು ರಾಮೇನಹಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಠದಲ್ಲಿ ಬುಧವಾರ ಪಟ್ಟಾಧಿಕಾರ ಮಹೋತ್ಸವವು ಭಕ್ತಿಭಾವ, ಶಿಸ್ತಿನ ವಿಧಿವಿಧಾನಗಳೊಂದಿಗೆ ವೈಭವದಿಂದ ನೆರವೇರಿತು. ಚರಮೂರ್ತಿಯಾಗಿದ್ದ ಸಿದ್ದಲಿಂಗಸ್ವಾಮಿಗಳಿಗೆ ಪಟಾಧಿಕಾರ ನೀಡಿ ಮಠದ ಧಾರ್ಮಿಕ ಪರಂಪರೆಯನ್ನು ಮುಂದುವರಿಸಲಾಯಿತು.
ಈ ಪವಿತ್ರ ಸಂದರ್ಭದಲ್ಲಿ ಮಠದ ಪೀಠಾಧ್ಯಕ್ಷ ಶಿವಪಂಚಾಕ್ಷರಿಸ್ವಾಮಿಯವರು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಸಿದ್ದಲಿಂಗಸ್ವಾಮಿಗಳಿಗೆ ಪಟ್ಟಾಧಿಕಾರ ಪ್ರದಾನ ಮಾಡಿ ಆಶೀರ್ವಾದ ನೀಡಿದರು.
ಪಟ್ಟಾಧಿಕಾರ ಸ್ವೀಕರಿಸಿದ ಶ್ರೀ ಸಿದ್ದಲಿಂಗಸ್ವಾಮಿಗಳು ಮಠದ ಧರ್ಮ, ದಾಸೋಹ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮೀಜಿ, ನವಗ್ರಹ ಲಕ್ಷ್ಮೀಶ್ವರಿ ಪೀಠದ ಡಾ. ನಾಗೇಂದ್ರ ಸ್ವಾಮಿಗಳು, ಪಿರಂಗಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು, ಜಡೆದೇವರ ಮಠದ ಬಸವರಾಜ ಸ್ವಾಮಿಗಳು, ಚಂದ್ರಶೇಖರ ಸ್ವಾಮಿಗಳು, ಗುಮಸಂದ್ರಮಠ ಕರೆದಮಠದ ವೀರಭದ್ರ ಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿ ಪಟ್ಟಾಧಿಕಾರ ಸ್ವೀಕರಿಸಿದ ಸಿದ್ದಲಿಂಗಸ್ವಾಮಿಗಳಿಗೆ ಶುಭಾಶಯಗಳು ಹಾಗೂ ಆಶೀರ್ವಾದಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು. ವೇದಘೋಷ, ಮಂಗಳವಾದ್ಯಗಳೊಂದಿಗೆ ನಡೆದ ಈ ಪಟ್ಟಾಧಿಕಾರ ಮಹೋತ್ಸವವು ಗ್ರಾಮದಲ್ಲಿ ಭಕ್ತಿ, ಶಾಂತಿ ಮತ್ತು ಧಾರ್ಮಿಕ ಚೈತನ್ಯವನ್ನು ಮೂಡಿಸಿತು.
Kshetra Samachara
28/01/2026 07:28 pm