ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಪ್ರೇಮಕಥೆಯೊಂದು ವರದಿಯಾಗಿದ್ದು, ಹಲವರ ಹುಬ್ಬೇರುವಂತೆ ಮಾಡಿದೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಪತ್ನಿ, ಕೇವಲ 2 ವರ್ಷಗಳಲ್ಲಿ ತನ್ನ ಗಂಡನನ್ನು ತೊರೆದು, ಆತನ ಆಪ್ತ ಸ್ನೇಹಿತನನ್ನೇ ಎರಡನೇ ಮದುವೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗ್ರಾಮದ ಸಾಗರ್ (ಆಟೋ ಚಾಲಕ) ಮತ್ತು ಹರವು ಗ್ರಾಮದ ಯುವತಿ ರಕ್ಷಿತಾ ಸುಮಾರು 4-5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಗರ್ ಪಾಂಡವಪುರದಿಂದ ತನ್ನ ಊರಿಗೆ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಮಾರ್ಗದಲ್ಲಿ ಕಾಲೇಜಿಗೆ ಹೋಗುತ್ತಿದ್ದ ರಕ್ಷಿತಾ, ಸಾಗರ್ನ ಆಟೋದಲ್ಲೇ ಪ್ರಯಾಣಿಸಲು ಇಷ್ಟಪಡುತ್ತಿದ್ದರು. ಬೇರೆ ಆಟೋಗಳಿದ್ದರೂ, ಸಾಗರ್ ಆಟೋಕ್ಕಾಗಿಯೇ ಕಾಯುತ್ತಿದ್ದರು. ಹೀಗೆ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಹಂತ ತಲುಪಿತು. ಮನೆಯವರ ವಿರೋಧದ ನಡುವೆಯೂ ರಕ್ಷಿತಾ, ಸಾಗರ್ನ ಮನೆಗೆ ತೆರಳಿ ಮದುವೆಯಾಗಲು ಪಟ್ಟು ಹಿಡಿದಿದ್ದರು. ಆಗ ರಕ್ಷಿತಾಗೆ 18 ವರ್ಷ ತುಂಬದ ಕಾರಣ, ಸಾಗರ್ ಆಕೆಯನ್ನು ತನ್ನ ಅಕ್ಕನ ಮನೆಯಲ್ಲಿ ಇರಿಸಿದ್ದರು. 18 ವರ್ಷ ತುಂಬಿದ ನಂತರ, ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾದರು. ತವರು ಮನೆಯವರು ಈ ಮದುವೆಯನ್ನು ವಿರೋಧಿಸಿ, ರಕ್ಷಿತಾಳನ್ನು ದೂರವಿಟ್ಟಿದ್ದರು. ಮದುವೆಯಾದ ಕೆಲ ದಿನಗಳ ನಂತರ, ರಕ್ಷಿತಾ ಮತ್ತೊಬ್ಬ ಯುವಕ ಇಂದ್ರ ಎಂಬಾತನ ಪ್ರೀತಿಯ ಗಾಳಕ್ಕೆ ಸಿಲುಕಿದ್ದಳು.
ಇಂದ್ರ, ಸಾಗರ್ನ ಆತ್ಮೀಯ ಸ್ನೇಹಿತನಾಗಿದ್ದು, ಆತನೊಂದಿಗೇ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಸಾಗರ್ನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಇಂದ್ರನಿಗೆ, ಸಾಗರ್ನ ಪತ್ನಿ ರಕ್ಷಿತಾ ಪರಿಚಯವಾಗಿದ್ದರು. ಮನೆಯವರ ಮುಂದೆ ಸಾಗರ್ನ ಪತ್ನಿಯನ್ನು 'ತಂಗಿ' ಎಂದು ಕರೆಯುತ್ತಿದ್ದ ಇಂದ್ರ, ತನಗೆ ಸಹೋದರಿ ಇಲ್ಲ, ಇವಳೇ ನನ್ನ ತಂಗಿ ಎಂದು ಹೇಳಿಕೊಳ್ಳುತ್ತಿದ್ದ. ರಕ್ಷಾ ಬಂಧನದ ಸಂದರ್ಭದಲ್ಲಿ ರಕ್ಷಿತಾಗೆ ಶುಭ ಕೋರಿದ್ದ. ಆದರೆ, ಇದೆಲ್ಲವೂ ಮನೆಯವರ ಮುಂದೆ ಆಡುತ್ತಿದ್ದ ನಾಟಕವಾಗಿತ್ತು. ಫೋನ್ನಲ್ಲಿ ರಕ್ಷಿತಾಳೊಂದಿಗೆ ಪ್ರೀತಿ ಪ್ರಣಯದ ಮಾತುಗಳನ್ನು ಆಡುತ್ತಿದ್ದ ಇಂದ್ರ, ಆಕೆಯನ್ನು ಪ್ರೀತಿ ಬಲೆಗೆ ಬೀಳಿಸಿ ಚಂದ್ರಲೋಕವನ್ನೇ ತೋರಿಸಿದ್ದ. ಅಂತಿಮವಾಗಿ, ರಕ್ಷಿತಾ ಮತ್ತು ಇಂದ್ರ ಇಬ್ಬರೂ ಏಕಾಏಕಿ ಓಡಿ ಹೋಗಿ ಮದುವೆಯಾಗಿದ್ದಾರೆ. ಈ ಘಟನೆಯು ಸಾಗರ್ ಹಾಗೂ ಅವರ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
PublicNext
22/04/2026 01:24 pm