ಮಡಿಕೇರಿ: ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ವಿಜ್ಞಾನ, ಗಣಿತ, ಆರ್ಯುವೇದ, ತತ್ವಶಾಸ್ತ್ರ ಮತ್ತು ಸಾಹಿತ್ಯ ಸೇರಿದಂತೆ ಅಪಾರ ಸಂಪತ್ತು ಹಸ್ತಪ್ರತಿಗಳ ರೂಪದಲ್ಲಿ ಅಡಗಿದೆ. ಸಮಯ ಬದಲಾದಂತೆ, ಕಾಲ ಓಡಿದಂತೆ ಈ ಅಮೂಲ್ಯ ನಿಧಿ ಧೂಳು ಹಿಡಿದು, ಗೆದ್ದಲು ಪಾಲಾಗುತ್ತಿದೆ. ಇದರ ಹೊರತಾಗಿ ಕೆಲವು ವಿದೇಶಿ ವಸ್ತು ಸಂಗ್ರಹಾಲಯಗಳ ಪಾಲಾಗಿವೆ. ನಮ್ಮ ಪೂರ್ವಿಕರ ಆಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತದ ಅಸ್ತಿತ್ವದ ಮರುಸ್ಥಾಪನೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸ್ಕೃತಿ ಸಚಿವಾಲಯ ʻಜ್ಞಾನ ಭಾರತಂʼ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ.
ಹಸ್ತಪ್ರತಿಗಳು ಕೇವಲ ಹಳೆಯ ಕಾಗದಗಳಾಗದೇ ಭಾರತೀಯ ಪರಂಪರೆಯ ಹುಟ್ಟು ಹಾಗೂ ಅದರ ಬೆಳವಣಿಗೆ ಮತ್ತು ಸಂಸ್ಕೃತಿಯ ಪರಿಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಹಸ್ತಪ್ರತಿಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬೆಸೆದು ಮುಂದಿನ ಪೀಳಿಗೆಗೆ ಪುರಾತನ ಯುಗದ ದರ್ಶನ ಮಾಡಿಸುವ ಪ್ರಮುಖ ಯೋಜನೆ ಇದಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಹಸ್ತಪ್ರತಿಗಳನ್ನು ಪತ್ತೆ ಹಚ್ಚಲು ಹಾಗೂ ತಮ್ಮ ಸಂಸ್ಥೆಯಲ್ಲಿ ಯಾವುದೇ ದಾಖಲೆ ಇದ್ದರೆ ಮಾಹಿತಿ ನೀಡಲು ಪುರಾತತ್ತ್ವ ಶಾಸ್ತ್ರಜ್ಞ ಮತ್ತು ಸಂಸ್ಕೃತಿ ಫೌಂಡೇಶನ್ ಕ್ಲಸ್ಟರ್ ಸೆಂಟರ್ ಮೈಸೂರು ಸಂಸ್ಥೆ, ದೇವಾಲಯ ಸಮಿತಿಯ ಮುಖ್ಯಸ್ಥರು, ಚರ್ಚ್ ಸಮಿತಿಯ ಮುಖ್ಯಸ್ಥರು, ದರ್ಗ ಸಮಿತಿಯ ಮುಖ್ಯಸ್ಥರು ಸಿಬ್ಬಂದಿಗೆ ಸೂಚಿಸಿದರು. ಸಭೆಯಲ್ಲಿ ಇದರ ಬಗ್ಗೆ ಕೂಡಲೇ ಪರಿಶೀಲಿಸಿ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
Kshetra Samachara
03/05/2026 07:37 am