ಸಿದ್ದಾಪುರ: ಸಿದ್ದಾಪುರದ ಟಿಎಂಎಸ್ ಸಂಸ್ಥೆ ಕೇವಲ ಅಡಿಕೆ ವ್ಯಾಪಾರ ಮಾತ್ರ ಸೀಮಿತವಾಗಿರದೆ ತಮ್ಮ ಸಂಸ್ಥೆಯ ಸದಸ್ಯರಿಗೆ ಹಾಗೂ ಸಾರ್ವಜನಿಕರ ಆರೋಗ್ಯ ಉತ್ತಮವಾಗಿರಲಿ ಎಂದು ಹಲವಾರು ಶಿಬಿರಗಳನ್ನು ಏರ್ಪಡಿಸುವುದರೊಂದಿಗೆ ಇಂದು ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿ ಆತನನ್ನು ಸದೃಢಗೊಳಿಸುವುದರ ಜೊತೆಗೆ ಕೃಷಿ ಚಟುವಟಿಕೆ ಅನುಕೂಲ ಆಗುವಂತೆ ಹಾಗೂ ಆರೋಗ್ಯವಂತ ದೇಹ ಕಾಪಾಡಿಕೊಳ್ಳುವಲ್ಲಿ ಆಯೋಜಿಸಿದ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಹೇಳಿದರು.
ಅವರು ಸಿದ್ದಾಪುರದ ಟಿಎಂಎಸ್ ಸಭಾಂಗಣದಲ್ಲಿ ಎಂ ಎಂ ಜೋಶಿ ಗಣೇಶ ನೇತ್ರಾಲಯ ಶಿರಸಿ ರವರ ಸಹಯೋಗದಲ್ಲಿ ಆಯೋಜಿಸಿದ ಉಚಿತ ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ದೇಹದಲ್ಲಿರುವ ಎಲ್ಲಾ ಅಂಗಾಂಗಗಳಿಗಿಂತ ಕಣ್ಣು ಬಹಳ ಮುಖ್ಯ. ನಾವು ಜೀವಿತ ಅವಧಿಯಲ್ಲಿ ಉತ್ತಮ ಆರೋಗ್ಯದೊಂದಿಗೆ ಬದುಕಿ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬದುಕಿಗೆ ಬೆಳಕಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಎಂಆರ್ ಕುಲಕರ್ಣಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ ಜಿ ನಾಗರಾಜ್, ಪ್ರಮುಖರಾದ ರವಿ ಹೆಗಡೆ ಹೂವಿನ ಮನೆ, ರಾಘವೇಂದ್ರ ಭಟ್, ಎಸ್ ಕೆ ಭಾಗವತ, ರಾಘವೇಂದ್ರ ಶಾಸ್ತ್ರಿ, ಸಂಸ್ಥೆ ವ್ಯವಸ್ಥಾಪಕ ಸತೀಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಟಿ ಎಂಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳಸರ್ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಎಂ.ಜಿ ನಾಯ್ಕ್ ಹಾದ್ರಿಮನೆ ಸ್ವಾಗತಿಸಿದರು ಜಿ ಜಿ ಹೆಗಡೆ ನಿರ್ವಹಿಸಿದರು.
PublicNext
27/05/2026 04:46 pm