ಮಂಗಳೂರು: ಕಾಂಗ್ರೆಸ್ ಒಂದು ಅರಾಜಕ ಪಕ್ಷ. ಅಂದರೆ ಅರಾಜಕತೆ ಗ್ಯಾರಂಟಿ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ, ಅವಿಶ್ವಾಸ, ಗೊಂದಲದ ವಾತಾವರಣವಿತ್ತು. ನಿನ್ನೆ ಮೊನ್ನೆಯಿಂದ ಇದರ ಪರಾಕಾಷ್ಠೆಗೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಂಗಳೂರಿನಲ್ಲಿ ಹೇಳಿದರು.
ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇರುವುದು. ಇದರಲ್ಲಿ ಮೂರು ಕಡೆಗಳಲ್ಲಿ ಮೇಲ್ಜಾತಿಯವರೇ ಸಿಎಂ. ಆದರೆ ದಿನ ಬೆಳಗಾದ್ರೆ ಕಾಂಗ್ರೆಸ್ ಒಬಿಸಿ ಮಂತ್ರ ಜಪಿಸುತ್ತದೆ. ಆದರೆ ಇದ್ದ ಒಬ್ಬ ಒಬಿಸಿ ಸಿಎಂಗೆ ಸಿದ್ದರಾಮಯ್ಯಗೆ ತೊಂದರೆ ಕೊಡಲು ಹೊರಟಿದ್ದಾರೆ. ಯಾವ ರೀತಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಅಪಮಾನ ಮಾಡಿದರೋ, ಅದೇ ರೀತಿ ಅವರ ಪುತ್ರ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನು ನಡೆಸಿಕೊಂಡಿದ್ದಾರೆ. ಹಾಗೆಂದು ಸಿದ್ದರಾಮಯ್ಯ ಭಾರೀ ಪ್ರಾಮಾಣಿಕ ಎಂದಲ್ಲ. ಆದರೆ ಅವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಮಾತ್ರ ಸರಿಯಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಸ್ಥಿರತೆ ಆದಷ್ಟು ಶೀಘ್ರ ಮುಕ್ತಾಯಗೊಳ್ಳಲಿ ಎಂದರು.
ಇತ್ತೀಚೆಗೆ ಕರ್ನಾಟಕದಲ್ಲಿ ಬಂದ ಸಿಎಂಗಳಲ್ಲಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಮಾಸ್ ಲೀಡರ್ಸ್ಗಳು. ಆದ್ದರಿಂದ ಸಿದ್ದರಾಮಯ್ಯರನ್ನು ಬಿಟ್ಟು ರಾಜ್ಯದ ಸ್ಥಿತಿ ಹೇಗಿರುತ್ತದೆ ಎಂದು ಹೇಳಲು ನಾನು ಭವಿಷ್ಯ ಹೇಳುವವನಲ್ಲ. ಆದರೆ ಅವರನ್ನು ನಡೆಸಿಕೊಂಡ ರೀತಿ ಮಾತ್ರ ಸರಿಯಲ್ಲ ಎಂದರು.
ಕರ್ನಾಟಕ ರಾಜ್ಯದ ಸರಕಾರದಲ್ಲಿ ಆಡಳಿತ ಇರಲೇ ಇಲ್ಲ. ಇಲ್ಲಿದ್ದದ್ದು ಕೇವಲ ತುಷ್ಠೀಕರಣ ಹಾಗೂ ಭ್ರಷ್ಟಾಚಾರ. ಡಿಕೆಶಿ ಸಿಎಂ ಆದರೂ ಅದು ಮುಂದುವರೆಯುತ್ತದೆ. ಕಾಂಗ್ರೆಸ್ ಅಸಫಲರಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದಿಲ್ಲ. ಮೋದಿಯವರ ಮಾರ್ಗದರ್ಶನದಲ್ಲಿ. ಸಕಾರಾತ್ಮಕ ಚಿಂತನೆಗಳ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಾವ ರೀತಿ ಬಂಗಾಳ ಅಸ್ಸಾಂ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದೆವೋ. ಅದೇ ರೀತಿ ಹಿಂದೆಂದೂ ಬಾರದ ಪ್ರಬಲ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರಹ್ಲಾದ ಜೋಶಿ ಭವಿಷ್ಯ ನುಡಿದರು.
PublicNext
28/05/2026 02:38 pm