ಅಮೆರಿಕ ಇಸ್ರೇಲ್ ಇರಾನ್ ಯುದ್ಧದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಭಾರೀ ಆತಂಕ ಮೂಡಿಸಿರುವ ನಡುವೆಯೇ, ಭಾರತದ ಹಡಗುಗಳು ಹೊರ್ಮುಜ್ ಜಲಸಂಧಿಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿರುವುದು ದೇಶಕ್ಕೆ ದೊಡ್ಡ ನೆಮ್ಮದಿಯ ಸುದ್ದಿಯಾಗಿದೆ.
ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಸುಮಾರು 20 ಪ್ರತಿಶತ ಸಾಗಾಟ ನಡೆಯುವ ಹೊರ್ಮುಜ್ ಜಲಸಂಧಿ ಕಳೆದ ಹಲವು ತಿಂಗಳಿಂದ ಉದ್ವಿಗ್ನತೆಯ ಕೇಂದ್ರಬಿಂದುವಾಗಿದೆ. ಅಮೆರಿಕ-ಇಸ್ರೇಲ್ ದಾಳಿಯ ಬಳಿಕ ಪ್ರತೀಕಾರದ ಕ್ರಮವಾಗಿ ಇರಾನ್ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಆರೋಪಗಳ ನಡುವೆ, ಈ ಮಾರ್ಗದಲ್ಲಿ ಸಾಗಾಟ ನಡೆಸುವುದು ಸವಾಲಿನ ಕೆಲಸವಾಗಿದೆ.
ಆದರೂ ಭಾರತವು ರಾಜತಾಂತ್ರಿಕ ಸಮನ್ವಯ ಮತ್ತು ಸೂಕ್ತ ಕಾರ್ಯತಂತ್ರದ ಮೂಲಕ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಹಡಗುಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಈ ಪ್ರದೇಶದಲ್ಲಿ ಭಾರತದ ಧ್ವಜ ಹೊಂದಿರುವ 13 ಹಡಗುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕಚ್ಚಾ ತೈಲ ಟ್ಯಾಂಕರ್ಗಳು, ಎಲ್ಪಿಜಿ ಟ್ಯಾಂಕರ್, ಕಂಟೈನರ್ ಹಡಗುಗಳು ಹಾಗೂ ಬಲ್ಕ್ ಕ್ಯಾರಿಯರ್ಗಳು ಸೇರಿವೆ. ಶಿವಾಲಿಕ್, ನಂದಾದೇವಿ, ಜಗ್ ಲಾಡ್ಕಿ ಮತ್ತು ಪೈನ್ ಗ್ಯಾಸ್ ಸೇರಿದಂತೆ ಹಲವು ಹಡಗುಗಳು ಸುರಕ್ಷಿತವಾಗಿ ಭಾರತ ತಲುಪಿವೆ.
ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶದ ಇಂಧನ ಪೂರೈಕೆಗೆ ಯಾವುದೇ ತೊಂದರೆ ಆಗದಂತೆ ಭಾರತ ಕೈಗೊಂಡಿರುವ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
30/05/2026 05:14 pm