ಚಿಂತಾಮಣಿ : ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹಳೆಯ ಗ್ಯಾರಂಟಿಗಳಿಗೇ ಹಣವಿಲ್ಲ,ಹೊಸ ಗ್ಯಾರಂಟಿಗಳಿಗೆ ಎಲ್ಲಿಂದ ಹಣ ತರುತ್ತಾರೆ?ಡಿ.ಕೆ ಶಿವಕುಮಾರ್ ಘೋಷಣೆ ಮಾಡಿರುವ ಹೊಸ ಗ್ಯಾರಂಟಿಗಳು ಬೋಗಸ್ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ಬಾಕಿ,ಅನ್ನ ಭಾಗ್ಯ ಯೋಜನೆಯ 700 ಕೋಟಿ ಬಾಕಿ ಇದೆ. ರಾಜ್ಯಾದ್ಯಂತ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುತ್ತಿದ್ದಾರೆ.ನೌಕರರ ವೇತನಕ್ಕೂ ಹಣವಿಲ್ಲದೆ ಬ್ಯಾಂಕಿನಿಂದ ಸಾಲ ಪಡೆಯಬೇಕಾಗಿದೆ. ರಾಜ್ಯ ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಇಳಿದಿದೆ. ಬೆಲೆ ಏರಿಕೆ ನಿತ್ಯ ಸುದ್ದಿಯಾಗಿದೆ.ಜನರ ಮೇಲೆ ತೆರಿಗೆಯ ಹೊರೆ ಹೊರಿಸುತ್ತಿದ್ದಾರೆ. ಹೀಗಿರುವಾಗ ಹೊಸ ಘೋಷಣೆಗಳಿಂದ ಯಾವ ಪ್ರಯೋಜನವೂ ಇಲ್ಲ. ರಾಜ್ಯದಲ್ಲಿ ಆರ್ಥಿಕ ಶಿಸ್ತು ದಾಟಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಂದ ಆಡಳಿತದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಅದೇ ಲಾರಿ, ಅದೇ ಹಳೆಯ ಪ್ರಯಾಣಿಕರು, ಮುಖ್ಯಮಂತ್ರಿ ಪರವಾಗಿರುವವರು ಒಬ್ಬರೂ ಇಲ್ಲ. ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಬೆಂಬಲಿಗರು ಮಂತ್ರಿಗಳಾಗಿದ್ದಾರೆ. ಅದೇ ಭ್ರಷ್ಟಾಚಾರ, ನುಂಗಣ್ಣರು. ನೇಮ್ ಪ್ಲೇಟ್ ಮಾತ್ರ ಬದಲಾವಣೆಯಾಗಿದೆ. ಕರ್ನಾಟಕ ರಾಹುಲ್ ಗಾಂಧಿ ಎಟಿಎಂ ಆಗುತ್ತದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿತು.ರಾಜ್ಯ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡದೆ,ತಾನು ಮಹಿಳಾ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ. ಮಹಿಳೆಯರಿಗೆ ಕಾಂಗ್ರೆಸ್ ಎಂತಹ ಗೌರವ ನೀಡುತ್ತಿದೆ ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಜೋಡಿ ಒಂದಾಗಲೇ ಇಲ್ಲ. ಕಳೆದ 3 ವರ್ಷಗಳಿಂದ ಡಿ.ಕೆ.ಶಿವಕುಮಾರ್ ಕಿತ್ತಾಡುತ್ತಿದ್ದರು. ಇನ್ನು ಮುಂದೆ ಸಿದ್ದರಾಮಯ್ಯ ಕಿತ್ತಾಡುತ್ತಾರೆ. ಉಳಿದ 2 ವರ್ಷಗಳಲ್ಲೂ ಕಾಂಗ್ರೆಸ್ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
PublicNext
05/06/2026 06:00 pm