ತುಮಕೂರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ನಗರ ಶಾಖೆಯಲ್ಲಿ 9ನೇ ಸಂಸ್ಥಾಪನಾ ದಿನಾಚರಣೆ ನಡೆಯಿತು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ವಿಮಾ ಯೋಜನೆಯಡಿ ಪರಿಹಾರದ ಚೆಕ್ ವಿತರಿಸಿದರು.
ಅಪಘಾತದಲ್ಲಿ ಮೃತಪಟ್ಟ ತುಮಕೂರು ತಾಲ್ಲೂಕು ಓಬಳಾಪುರ ಗ್ರಾಮದ ಮಲ್ಲೇಶಯ್ಯ ಅವರ ಕುಟುಂಬದವರಿಗೆ ‘ನಿವಾ ಬೂಪಾ’ ಅಪಘಾತ ವಿಮಾ ಯೋಜನೆಯಡಿ 10 ಲಕ್ಷ ರೂಪಾಯಿಗಳ ಚೆಕ್ ಅನ್ನು ಜಿಲ್ಲಾಧಿಕಾರಿ ವಿತರಿಸಿದರು.
ಮಲ್ಲೇಶಯ್ಯ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ವಾರ್ಷಿಕ ಕೇವಲ 549 ರೂಪಾಯಿ ಪ್ರೀಮಿಯಂ ಪಾವತಿಸಿ, ಗ್ರೂಪ್ ಆಕ್ಸಿಡೆಂಟ್ ಇನ್ಷೂರೆನ್ಸ್ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರು. ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟ ಹಿನ್ನೆಲೆಯಲ್ಲಿ, ಯೋಜನೆಯ ನಿಯಮಾನುಸಾರ ಅವರ ನಾಮಿನಿಯಾಗಿರುವ ಪತ್ನಿ ಪಿ. ಲಲಿತಮ್ಮ ಅವರಿಗೆ 10 ಲಕ್ಷ ರೂಪಾಯಿ ವಿಮಾ ಪರಿಹಾರ ಮಂಜೂರಾಯಿತು.
ಈ ವಿಮಾ ಪರಿಹಾರದ ಚೆಕ್ ಅನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕ ಸಿ.ಎಚ್. ಚೈತನ್ಯ ಕುಮಾರ್ ಅವರು ಫಲಾನುಭವಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಐಪಿಪಿಬಿಯು ಗ್ರಾಮೀಣ ಜನರ ಆರ್ಥಿಕ ಸೇರ್ಪಡೆ, ಅಂಚೆ ಇಲಾಖೆಯ ಡಿಜಿಟಲೀಕರಣ ಹಾಗೂ ಮನೆ ಬಾಗಿಲಿಗೆ ಅಂಚೆ ಸೇವೆ ನೀಡುತ್ತಿರುವ ಕುರಿತು ಶ್ಲಾಘಿಸಿದರು.
ತುಮಕೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕರು, ಎಲ್ಲಾ ಅಂಚೆ ನಿರೀಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
PublicNext
02/09/2026 01:00 pm
LOADING...