ಕಡೂರು: ಮಧ್ಯರಾತ್ರಿಯ ವೇಳೆಯಲ್ಲಿ ಬಾರ್ ಒಂದರಲ್ಲಿ ನಡೆದ ಮೋಜು-ಮಸ್ತಿ, ಕರ್ಕಶ ಧ್ವನಿಯ ಹಾಡುಗಳು ಹಾಗೂ ಕೂಗಾಟ-ಕಿರುಚಾಟದಿಂದ ಬೇಸತ್ತ ಗ್ರಾಮಸ್ಥರು ರೊಚ್ಚಿಗೆದ್ದು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರಹಟ್ಟಿ ಗ್ರಾಮದಲ್ಲಿ ನಡೆದಿದೆ. ಬಾರ್ನಲ್ಲಿ ತಡರಾತ್ರಿ ಮಿತಿಮೀರಿದ ಶಬ್ದದೊಂದಿಗೆ ಪಾರ್ಟಿ ನಡೆಸುತ್ತಿದ್ದ ಪರಿಣಾಮ ಗ್ರಾಮಸ್ಥರ ನಿದ್ದೆಗೆ ಭಂಗ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಏಕಾಏಕಿ ಬಾರ್ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗಲಾಟೆ ಸೃಷ್ಟಿಸುತ್ತಿದ್ದವರನ್ನು ಬಾರ್ ಒಳಗೆಯೇ ಕೂಡಿಹಾಕಿ ಪ್ರತಿಭಟಿಸಿದ ಸ್ಥಳೀಯರು, ಗ್ರಾಮದ ಶಾಂತಿ ಕದಡುತ್ತಿರುವ ಈ ಬಾರ್ ಅನ್ನು ತಕ್ಷಣವೇ ಶಾಶ್ವತವಾಗಿ ಬಂದ್ ಮಾಡಿಸಬೇಕೆಂದು ಪಟ್ಟುಹಿಡಿದರು.
ಘಟನಾ ಸ್ಥಳಕ್ಕೆ ಕಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಶಾಂತಿ ಭಂಗ ತರುತ್ತಿರುವ ಬಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರಿಗೆ ಆಗ್ರಹಿಸಿದ್ದಾರೆ.
PublicNext
18/09/2026 02:07 pm
LOADING...