ಚಿಕ್ಕೋಡಿ: ಮಜಲಟ್ಟಿ ಕಾಲೇಜು ಇಡೀ ರಾಜ್ಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾಗಿದೆ ಎಂದು ಶಾಸಕ ದುರ್ಯೋದನ ಐಹೊಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿವೇಕ ಕೊಠಡಿ ಯೋಜನೆಯಡಿಯಲ್ಲಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲಾಗುವುದು. ಗುಣಮಟ್ಟದ ಬೋಧನೆ ಮಾಡುವ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲಿನ ಕಾಲೇಜಿನ ಬಡತನದ ಬಾಲಕಿ ಕಾವೇರಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.
ಮಜಲಟ್ಟಿ ಕಾಲೇಜಿಗೆ ಬೇಕಾಗಿರುವ ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಜಲಟ್ಟಿ ಕಾಲೇಜು ಇಷ್ಟೊಂದು ಎತ್ತರಕ್ಕೆ ಬೆಳೆಯಲು ದಿವಗಂತ ಬಿ.ಆರ್. ಸಂಗಪ್ಪಗೋಳ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ಅಧ್ಯಕ್ಷತೆ ವಹಿಸಿದ್ದರು. ವಿಜಯ ಕೋಠಿವಾಲೆ, ಅಣ್ಣಾಸಾಹೇಬ ಖೇಮಲಾಪುರೆ, ಜಿ.ಪಿ. ತಂಗಡಿ, ರಾಜು ಹರಗನ್ನವರ, ರಾಜು ನಾಯಿಕ, ಜಿ.ಎಸ್. ಕಾಮಕರ, ತುಕ್ಕಪಣ್ಣಾ ಸನದಿ, ಮಾರುತಿ ಖೋತ, ದುಂಡಪ್ಪಾ ಚೌಗಲಾ, ರಾಜು ಸನದಿ,ಗುತ್ತಿಗೆದಾರ ರಾಜು ನಾಯಿಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಹಣಮಂತ ಠಕ್ಕನವರ ಸ್ವಾಗತಿಸಿದರು. ಆರ್.ಬಿ. ಪಾಟೀಲ ನಿರೂಪಿಸಿದರು.
Kshetra Samachara
29/06/2025 01:29 pm