ಶಿರಹಟ್ಟಿ: ನಮ್ಮ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ನೀರಾವರಿ ಯೋಜನೆಗಳನ್ನು ತರುವ ಬಗ್ಗೆ ನಾನು ಅಧಿವೇಶನದಲ್ಲಿ ಮಾತನಾಡುತ್ತೇನೆ. ಆದರೆ, ಈ ಬಾರಿ ಬೆಳೆ ವಿಮೆ ತುಂಬುವ ಸಮಯದಲ್ಲಿ ಮೆಕ್ಕೆಜೋಳ ಬೆಳೆಯನ್ನು 16,512 ಹೆಕ್ಟೇರ್ ತುಂಬಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ನಡೆದ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆಯ ಪ್ರಗತಿ ಕಾರ್ಯದ ಪರಿಶೀಲನಾ ಸಭೆಯಲ್ಲಿ ಶಾಸಕರು ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನೀವು ಜಮೀನುಗಳಿಗೆ ಹೋಗಿ ಸಮೀಕ್ಷೆ ಮಾಡದೆ ಹಾಗೆ ಎಲ್ಲೋ ಒಂದೆರಡು ಹೊಲಗಳಿಗೆ ಹೋಗಿ ವರದಿ ಮಾಡಿ ಕೊಟ್ಟಿದ್ದೀರಿ. ಮುಖ್ಯವಾಗಿ ನಮ್ಮ ತಾಲೂಕಿನಲ್ಲಿ ಮೆಕ್ಕೆಜೋಳ ಬಹಳಷ್ಟು ಹಾನಿಯಾಗಿದೆ. ನಿಮ್ಮ ವರದಿಯ ಪ್ರಕಾರ ಮೆಕ್ಕೆಜೋಳ ಒಂದು ಹೆಕ್ಟೇರ್ ಕೂಡಾ ಹಾನಿಯಾಗಿಲ್ಲ ಎಂದು ಕೊಟ್ಟಿದ್ದೀರಿ ಎಂದು ಸಭೆಗೆ ಆಗಮಿಸಿದ ರೈತರು ಕೂಡಾ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕೂಡಲೇ ಕೃಷಿ ಅಧಿಕಾರಿ ರೇವಣ್ಣೆಪ್ಪ ಮನಗೋಳಿ ಅವರನ್ನು ಅಮಾನತು ಮಾಡಬೇಕು. ಇಲ್ಲವಾದರೆ ರೈತರೆಲ್ಲರೂ ಸೇರಿಕೊಂಡು ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಘವೇಂದ್ರ ರಾವ್ ಹಾಗೂ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಪಟ್ಟಣದ ಮುಖಂಡರು, ರೈತರು ಉಪಸ್ಥಿತರಿದ್ದರು.
Kshetra Samachara
07/09/2025 08:00 am