ರಾಯಬಾಗ: ಕುಡಚಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಕುಡಚಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣವನ್ನು ತಾಲೂಕು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಿಂದ ಸಹಸ್ರಾರು ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪ ತಹಶೀಲ್ದಾರ್ ಎಸ.ಜಿ.ದೊಡಮನಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕುಡಚಿ ಪಟ್ಟಣವು ಮತಕ್ಷೇತ್ರದ ಕೇಂದ್ರ ಸ್ಥಾನ ಆಗಿದ್ದು, ಪುರಸಭೆ ಗ್ರಾಮ ಪಂಚಾಯಿತಿ ಇದ್ದು, ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, ಬಸ್ ನಿಲ್ದಾಣ, ರೈಲು ನಿಲ್ದಾಣ, ಕೃಷ್ಣಾ ನದಿ ಹಾಗೂ ವಿವಿಧ ಕಚೇರಿಗಳು ಸೇರಿದಂತೆ ಆರ್ಥಿಕವಾಗಿ, ಭೌಗೋಳಿಕವಾಗಿ ವಿಶಾಲವಾಗಿದ್ದು, ತಾಲೂಕು ಕೇಂದ್ರ ಆಗಲು ಬಹುತೇಕ ಕಚೇರಿಗಳು ಸದ್ಯದಲ್ಲಿ ಇಲ್ಲಿಯೇ ಇವೆ. ಸರ್ಕಾರ ಕೂಡಲೇ ಕುಡಚಿ ಪಟ್ಟಣವನ್ನು ಇದೇ ಅಧಿವೇಶನದಲ್ಲಿ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಒಂದು ವೇಳೆ ಅದು ಆಗದೇ ಹೋದಲ್ಲಿ ಕುಡಚಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸೇರಿಕೊಂಡು ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಪುರಸಭೆ ಅಧ್ಯಕ್ಷ ಹಮಿದೋದ್ದಿನ್ ರೋಹಿಲೆ ಎಚ್ಚರಿಕೆ ನೀಡಿದರು.
PublicNext
16/12/2025 09:14 am
LOADING...