ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಂಚಿನ ಜನ ಪ್ರತೀ ದಿನ ಕಾಡಾನೆ ಹಾವಳಿಗೆ ಬೇಸತ್ತಿದ್ದಾರೆ. ಕಾಡಾನೆ ಸಂಚಾರದ ಬಗ್ಗೆ ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆಯವರೇ ಮಾಹಿತಿ ನೀಡಿದ್ದು, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬದ ಅರಣ್ಯದಂಚಿನ ಗ್ರಾಮಗಳಲ್ಲಿ ಸುಮಾರು 80 ಕಾಡಾನೆಗಳು ಸಂಚರಿಸುತ್ತಿರುವ ಬಗ್ಗೆ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆ ನಾಶವಾಗಿದ್ದು, ಹಲವು ತೋಟಗಳಲ್ಲಿ ಅಡಿಕೆ, ಬಾಳೆ ಗಿಡಗಳಿಗೆ ಹಾನಿಯಾಗಿದೆ. ಕಾಡಾನೆ ಉಪಟಳದಿಂದ ಜನ ಭಯಭೀತರಾಗಿದ್ದಾರೆ.
ಈ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗೆ ಸೂಚನೆ ನೀಡಿರುವ ಅರಣ್ಯ ಇಲಾಖೆ ಸಚಿವ ಈಶ್ವರ ಬಿ.ಖಂಡ್ರೆ, ವಸತಿ ಪ್ರದೇಶಗಳ ಬಳಿ ಆನೆ ಬಂದಾಗ ನಿಗಾ ವಹಿಸಿ, ತಕ್ಷಣ ಅವುಗಳನ್ನು ಕಾಡಿಗೆ ಮರಳಿಸಲು ಮತ್ತು ಜೀವಹಾನಿ ಆಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಮಲವಂತಿಗೆ, ಪಟ್ರಮೆ, ಕೊಕ್ಕಡ, ಶಿಶಿಲ, ಕಡಬದ ಸಿರಿಬಾಗಿಲು ಸೇರಿದಂತೆ, ಸುಳ್ಯ ಭಾಗಗಳಲ್ಲೂ ಕಾಡಾನೆ ಹಾವಳಿಗೆ ಜನ ತತ್ತರಿಸಿದ್ದಾರೆ. ಕಡಬ, ಕೊಕ್ಕಡದಲ್ಲಿ ಕಾಡಾನೆ ದಾಳಿಗೆ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ಅರಣ್ಯ ಸಚಿವರೇ ನಾಲ್ಕು ತಾಲೂಕಿನ ಕಾಡಂಚಿನಲ್ಲಿ 80ಕ್ಕೂ ಅಧಿಕ ಕಾಡಾನೆಗಳ ಸಂಚಾರದ ಬಗ್ಗೆ ಮಾಹಿತಿ ನೀಡಿದ್ದು, ಜನರಿಗೆ ಆತಂಕ ಮೂಡಿಸಿದೆ.
PublicNext
17/12/2025 10:40 pm
LOADING...