ಮಂಗಳೂರು: ಇತ್ತೀಚಿಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಕೆಲವೊಂದು ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆದದ್ದೂ ಇದೆ. ಆದ್ದರಿಂದ ಶಾಲೆಗಳು ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಏನೇನೋ ಪ್ರಯತ್ನ ಮಾಡುತ್ತಿದೆ. ಇದೇ ಮಾದರಿಯಲ್ಲಿ ದಾಖಲಾತಿ ಹೆಚ್ಚಳಕ್ಕೆ ವಿನೂತನ ಪ್ರಯತ್ನವೊಂದು ನಡೆದಿದೆ.
ಇದು ಮಂಗಳೂರಿನ ಅಶೋಕ ನಗರದ ಹಿರಿಯ ಪ್ರಾಥಮಿಕ ಶಾಲೆ. ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಮಕ್ಕಳನ್ನು ಆಕರ್ಷಿಸಲು ದಾನಿಗಳ ನೆರವಿನಿಂದ ಉಚಿತ ಬ್ಯಾಂಕ್ ಖಾತೆ ತೆರೆಯುವ ವಿನೂತನ ಪ್ರಯತ್ನವೊಂದು ನಡೆದಿದೆ. ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾದ 1ರಿಂದ 3ನೇ ತರಗತಿಯ 17 ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
5ವರ್ಷಗಳಿಗೆ ಅನ್ವಯವಾಗುವಂತೆ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲಿ ತಲಾ 5ಸಾವಿರ ರೂ.ವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. 17ವಿದ್ಯಾರ್ಥಿಗಳ ಠೇವಣಿಯ ಮೊತ್ತವನ್ನು ಉದ್ಯಮಿ ದಿನಕರ ರಾವ್ ಹಾಗೂ ಉಷಾ ದಿನಕರ್ ರಾವ್ ದಂಪತಿ ಪಾವತಿಸಿದ್ದಾರೆ. 5ವರ್ಷಗಳ ಬಳಿಕ ಈ ಮೊತ್ತ 6,690 ರೂ. ಆಗುತ್ತದೆ. ಅದಕ್ಕೆ ಕಂಡೀಷನ್ ಇದ್ದು, ವಿದ್ಯಾರ್ಥಿಯು 5ವರ್ಷಗಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಬೇಕು. ಹಾಜರಾತಿ ಕಡಿಮೆಯಾಗಬಾರದು. ಈ ಮೂಲಕ 5ವರ್ಷಗಳ ಬಳಿಕ ವಿದ್ಯಾರ್ಥಿ ಆ ಹಣವನ್ನು ಖಾತೆಯಿಂದ ಪಡೆಯಬಹುದು.
ಸದ್ಯ ಶಾಲೆಯಲ್ಲಿ 100ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಶಾಲೆಗೆ ಸರ್ಕಾರದ ಪ್ರೋತ್ಸಾಹ ಸಾಕಷ್ಟು ಸಿಗದಿದ್ದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಸಂಘ ಸಂಸ್ಥೆ ದಾನಿಗಳ ನೆರವು ಮಾತ್ರ ಉತ್ತಮವಾಗಿಯೇ ಸಿಗುತ್ತಿದೆ. ಇದೇ ಕಾರಣದಿಂದ ಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
PublicNext
17/12/2025 06:09 pm
LOADING...