ಮಂಗಳೂರು: ಕರಾವಳಿಯಲ್ಲಿ ಪಟ್ಟಣ ಪಂಚಾಯತ್ ಚುನಾವಣಾ ಕಾವು ಏರಿದ್ದು, ಹಳೆಯ ಕೊಲೆ ಪ್ರಕರಣ ಮೇಲ್ಪಂಕ್ತಿಗೆ ಬಂದಿದೆ. ಈ ಮೂಲಕ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 'ಹತ್ಯೆ' ರಾಜಕೀಯ ಭಾರೀ ಸದ್ದು ಮಾಡುತ್ತಿದೆ.
ಮೂಡಬಿದಿರೆ ಕ್ಷೇತ್ರದ ಬಜಪೆ ಹಾಗೂ ಕಿನ್ನಿಗೋಳಿ ಪ.ಪಂ ಚುನಾವಣೆಯಲ್ಲಿ ಹೊಸ ವಿವಾದವೊಂದು ಸದ್ದು ಮಾಡುತ್ತಿದೆ. 2006ರ ಸುಖಾನಂದ ಶೆಟ್ಟಿ ಹಾಗೂ 2025 ಸುಹಾಸ್ ಶೆಟ್ಟಿ ಹತ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ಇಬ್ಬರು ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿಗಳಿಗೆ ಕಾಂಗ್ರೆಸ್ ನಂಟಿನ ಆರೋಪ ಮಾಡಲಾಗಿದೆ. ಈ ಮೂಲಕ ಡಿ.21ರಂದು ನಡೆಯಲಿರುವ ಪ.ಪಂ ಚುನಾವಣೆಗೆ ಬಿಜೆಪಿ 'ಹತ್ಯೆ' ಅಸ್ತ್ರ ಪ್ರಯೋಗಿಸಿದೆ.
ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಹೊಸ ವಾಗ್ವಾದ ಶುರುವಾಗಿದೆ. ಸುಖಾನಂದ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಯೇ ಆಗಿನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಬೂಬಕ್ಕರ್ ಪುತ್ರ ಶಾಕೀರ್. ಸುಹಾಸ್ ಶೆಟ್ಟಿ ಹತ್ಯೆಯ ತನಿಖಾ ವರದಿಯಲ್ಲೂ ಒಂದು ಚಿಕ್ಕಮಗಳೂರು ರೆಸಾರ್ಟ್ನ ಉಲ್ಲೇಖವಾಗಿತ್ತು. ಆ ರೆಸಾರ್ಟ್ ಗೆ ಇಲ್ಲಿನ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟದ್ದು ಹಾಗೂ ಆ ಹತ್ಯೆಯಲ್ಲಿ ರೆಸಾರ್ಟ್ ಸಿಬ್ಬಂದಿ ಕೂಡ ಭಾಗಿಯಾಗಿದ್ದರು ಎಂದು ಆರೋಪ ಕೇಳಿ ಬಂದಿದೆ.
ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಮುಖಂಡ, ಡಿಕೆಶಿ ಆಪ್ತ ಮಿಥುನ್ ರೈ ತಿರುಗೇಟು ನೀಡಿದ್ದಾರೆ. ಸುಹಾಸ್ ಹತ್ಯೆಯಲ್ಲಿ ಕಾಂಗ್ರೆಸ್ ನಂಟಿಲ್ಲ ಎಂದು ಅವರು ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಾರೆ. ಅಲ್ಲದೇ ಮಿಥುನ್ ರೈಯವರು ಬಜಪೆ ಶಾಂತಿಗುಡ್ಡೆ ಬಿಜೆಪಿ ಅಭ್ಯರ್ಥಿಗೆ ಎಸ್ಡಿಪಿಐನೊಂದಿಗೆ ನಂಟಿನ ಆರೋಪ ಮಾಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಈ ರಾಜಕೀಯ ಕೆಸರೆರಚಾಟ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಆಣೆ ಪ್ರಮಾಣ ಹೆಸರಿನಲ್ಲಿ ಕಟೀಲಿನ ಹೆಸರು ಬಳಕೆಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದೆ.
PublicNext
20/12/2025 07:44 am