ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಮತಾಂತರ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಜರ್ಮನ್ ಮೂಲದ ದಂಪತಿ ಸೇರಿದಂತೆ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣ ಹಾಗೂ ವಿವಿಧ ಆಮಿಷವೊಡ್ಡಿ ಜನರನ್ನು ಮತಾಂತರ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಶ್ರೀಗಂಗಾನಗರದ ಬಾಡಿಗೆ ಮನೆಯೊಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಚರ್ಚ್ ಚಟುವಟಿಕೆಗಳ ಮೇಲೆ ದಾಳಿ ನಡೆಸಲಾಗಿದೆ. ಜರ್ಮನ್ ಪ್ರಜೆಗಳಾದ ಸ್ವೆನ್ ಬೋಸ್ (Sven Bos) ಮತ್ತು ಸ್ಯಾಂಡ್ರಾ (Sandra) ಎಂಬ ದಂಪತಿಗಳು ಸ್ಥಳೀಯ ಜನರಿಗೆ ಹಣಕಾಸಿನ ನೆರವು ಹಾಗೂ ಇತರೆ ಆಮಿಷಗಳನ್ನು ಒಡ್ಡಿ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ರಹಸ್ಯ ಕಾರ್ಯಾಚರಣೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮತಾಂತರ ದಂಧೆಯನ್ನು ಖಂಡಿಸಿ ಕಟ್ಟಡದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಜರ್ಮನ್ ದಂಪತಿ ಹಾಗೂ ಅವರಿಗೆ ಸಹಕರಿಸುತ್ತಿದ್ದ ಇತರ ಐವರು ಸೇರಿದಂತೆ ಒಟ್ಟು ಏಳು ಜನರನ್ನು ವಶಕ್ಕೆ ಪಡೆದರು. ಸದ್ಯ, ಬಂಧಿತರ ವೀಸಾ ದಾಖಲೆಗಳು ಮತ್ತು ಈ ಮತಾಂತರ ಜಾಲದ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
PublicNext
20/12/2025 01:27 pm
LOADING...