ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾಲೀಕತ್ವದ ರೆಸಾರ್ಟ್ನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸವನ್ನು ನೀಡುವ ಮೂಲಕ ಆಶ್ರಯ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದೇಶದ ಭದ್ರತೆಗೆ ಸವಾಲಾಗಬಲ್ಲ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಲಂಕುಶ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಎಸ್ಡಿಪಿಐ ಉಡುಪಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಅಬ್ದುಲ್ ರಹೀಮ್ ಆಗ್ರಹಿಸಿದ್ದಾರೆ.
ಸಾರ್ವಜನಿಕ ವೇದಿಕೆಗಳಲ್ಲಿ ದೇಶಪ್ರೇಮದ, ದೇಶದ ಭದ್ರತೆಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಸೂರುಗಳಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವುದು ಇವರ ಡೋಂಗಿ ದೇಶಪ್ರೇಮವನ್ನು ಸಾಬೀತುಪಡಿಸುತ್ತದೆ.
ಒಂದು ವೇಳೆ ಬೇರೆ ಪಕ್ಷದವರ ಅಥವಾ ಬೇರೆ ಧರ್ಮದವರ ರೆಸಾರ್ಟ್ ಗಳಲ್ಲಿ ಅಕ್ರಮ ವಲಸಿಗರು ಪತ್ತೆಯಾಗುತ್ತಿದ್ದರೆ ಸ್ವಯಂಘೋಷಿತ ದೇಶಪ್ರೇಮಿಗಳ ಚೀರಾಟ ರಂಪಾಟ ಮಿತಿಮೀರುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕರ ಮೌನ ಧರ್ಮ ರಕ್ಷಣೆ, ದೇಶಪ್ರೇಮ ಇವೆಲ್ಲವೂ ಕೇವಲ ಅಧಿಕಾರ ಹಿಡಿಯಲು ಇವರಿಗೆ ಬೇಕಾಗಿರುವ ಮೆಟ್ಟಿಲುಗಳೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸುತ್ತಿದೆ.ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
Kshetra Samachara
20/12/2025 09:04 pm