ಉಡುಪಿ: ನಗರದ ಕಡಿಯಾಳಿಯ ಶಾರದ ಕಲ್ಯಾಣಮಂಟಪ ಬಳಿಯ ಓವೈಸಿ ಸಭಾಂಗಣದಲ್ಲಿ ಡಿ.21ರ ರವಿವಾರ ನಡೆಯಲಿರುವ ರಂಗಭೂಮಿ ಟ್ರಸ್ಟ್ ಕೊಡಗು ಇವರು ಪ್ರಸ್ತುತ ಪಡಿಸುವ 'ನಿಜ ಮಹಾತ್ಮ ಬಾಬಾ ಸಾಹೇಬ' ಹೆಸರಿನ ನಾಟಕದ ಪ್ರದರ್ಶನವನ್ನು ರದ್ದುಪಡಿಸುವಂತೆ ಕೋರಿ ಪಕ್ಷದ ಎಸ್ಸಿ ಘಟಕದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಅವಿತಿಟ್ಟ ಸತ್ಯಗಳ ಸ್ಫೋಟಕ ನಾಟಕ ಪ್ರದರ್ಶನ ಎಂಬ ಉಪನಾಮದೊಂದಿಗೆ ನಾಟಕ ಪ್ರದರ್ಶಿಸುವ ಬಗ್ಗೆ ಬಹಿರಂಗ ಜಾಹೀರಾತುಗಳನ್ನು ಈಗಾಗಲೇ ನೀಡಲಾಗಿದೆ. ಉಡುಪಿ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ನಾಟಕದ ಪೋಸ್ಟರ್ಗಳಲ್ಲಿ ತಿಳಿಸಿರುವಂತೆ ನಾಟಕವು ಪಾಕಿಸ್ತಾನ ವಿಭಜನೆ, ಮುಸ್ಲಿಮರ ಬಗೆಗಿನ ಬಾಬಾ ಸಾಹೇಬರ ಅಭಿಪ್ರಾಯ, ಕಾಂಗ್ರೆಸ್ ಪಕ್ಷದ ದ್ರೋಹ ಎಂಬ ಒಕ್ಕಣೆಗಳು ಈ ನಾಟಕದ ಆಯೋಜಕರ ಪೂರ್ವಗ್ರಹ ಪೀಡಿತ ಅಸಹನೆ ಹಾಗೂ ದ್ವೇಷಪೂರಿತ ಉದ್ದೇಶಗಳನ್ನು ಒತ್ತಿ ಹೇಳುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಎಲ್ಲಾ ಪ್ರಚಾರಗಳನ್ನು ಗಮನಿಸಿದಾಗ, ಆಯೋಜಕರ ಉದ್ದೇಶ, ಸಮುದಾಯಗಳ ಮಧ್ಯದ ಸಾಮರಸ್ಯವನ್ನು ಹತ್ತಿಕ್ಕಿ ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ಪಸರಿಸುವುದೇ ಆಗಿದೆ. ಹಾಗೂ ಮಹಾಮಾನವತಾವಾದಿಗಳಾದ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ತಪ್ಪಾಗಿ ಪ್ರಸ್ತುತ ಪಡಿಸಿ ಅವರ ಹೆಸರಿನಲ್ಲಿ ಮುಸ್ಲಿಂ- ದಲಿತ ದ್ವೇಷವನ್ನು ಹೆಚ್ಚಿಸುವುದೇ ಆಗಿದೆ.ಆದ್ದರಿಂದ ಈ ನಾಟಕದ ಪ್ರದರ್ಶನದ ಅನುಮತಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ವಿನಂತಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ ಕೊಡವೂರು, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಜಯಕುಮಾರ್, ಕೇಶವ ಸಾಲ್ಯಾನ್, ಲಕ್ಷ್ಮೀಶ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಸುಮನ ಬೋಳಾರ್, ಸಂಧ್ಯಾ ತಿಲಕ್, ಸುಕನ್ಯಾ ಪೂಜಾರಿ ಉಪಸ್ಥಿತರಿದ್ದರು.
Kshetra Samachara
20/12/2025 01:46 pm