ಹೈದರಾಬಾದ್: ವರದಕ್ಷಿಣೆಗಾಗಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಮಾರಣಾಂತಿಕವಾಗಿ ಥಳಿಸಿ ಕೊಂದ ಭೀಕರ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಕ್ರೂರ ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಅನುಷಾ (22) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪರಮೇಶ್ ಕುಮಾರ್ ಹತ್ಯೆ ಆರೋಪಿಯಾಗಿದ್ದಾನೆ.
ಎಂಟು ತಿಂಗಳ ಹಿಂದಷ್ಟೇ ಅನುಷಾ ಮತ್ತು ಪರಮೇಶ್ ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ನಡೆಯುವ ಎರಡು ದಿನಗಳ ಮೊದಲು, ಜಗಳವಾಡಿಕೊಂಡು ಅನುಷಾ ತನ್ನ ತವರು ಮನೆಗೆ ತೆರಳಿದ್ದರು. ಆಗ, ಇನ್ನು ಮುಂದೆ ಯಾವುದೇ ಜಗಳ ನಡೆಯುವುದಿಲ್ಲ ಎಂದು ಕುಟುಂಬಕ್ಕೆ ಭರವಸೆ ನೀಡಿ ಪರಮೇಶ್ ಕುಮಾರ್ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದ.
ಆದರೆ, ಮನೆಗೆ ಕರೆತಂದ ಕೂಡಲೇ ಪರಮೇಶ್ ಕುಮಾರ್ ತನ್ನ ಕ್ರೂರ ರೂಪವನ್ನು ಪ್ರದರ್ಶಿಸಿದ್ದಾನೆ. ಬೈಕ್ನಲ್ಲಿ ಮನೆಯ ಬಳಿ ಬಂದವನೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಹೊಟ್ಟೆಗೆ ಒದ್ದು, ದೊಣ್ಣೆಯಿಂದ ಆರು ಬಾರಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಕೆಲವರು ತಡೆಯಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ, ಗಂಭೀರವಾಗಿ ಗಾಯಗೊಂಡ ಅನುಷಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದ್ದಾರೆ.
ಅನುಷಾಳ ಸಹೋದರ ಈ ಸಂಬಂಧ ದೂರು ದಾಖಲಿಸಿದ್ದು, ಆರೋಪಿ ಪರಮೇಶ್ ಕುಮಾರ್ ಮತ್ತು ಆತನ ತಾಯಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
21/12/2025 02:44 pm