ಸುಂಟಿಕೊಪ್ಪ: ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲಾದ ಹೃದಯವಿದ್ರಾವಕ ಘಟನೆ ಗರಗಂದೂರು ಮಲಿಕಾರ್ಜುನ ಕಾಲೋನಿಯ ಮಾದಾಪುರ ಹೊಳೆಯಲ್ಲಿ ಶನಿವಾರದಂದು ನಡೆದಿದೆ.
ಮಾದಾಪುರ ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಹಮದ್ ರಾಯಿಜ್ (೧೬) ಮತ್ತು ಮಹಮದ್ ನಿಹಾಲ್ (೧೬) ಮೃತ ಬಾಲಕರು.
ಇಬ್ಬರು ವಿದ್ಯಾರ್ಥಿಗಳು ಶನಿವಾರದಂದು ಕಾಲೇಜು ಮುಗಿಸಿ ಮಧ್ಯಾಹ್ನ ೨ ಗಂಟೆಯ ವೇಳೆಯಲ್ಲಿ ಕಾಲೇಜಿನಿಂದ ಹೊರಟಿದ್ದಾರೆ. ಬಳಿಕ ಮನೆಗೆ ತೆರಳದೆ ಮಲಿಕಾರ್ಜುನ ಕಾಲೋನಿ ಬಳಿಯ ಮಾದಾಪುರ ಹೊಳೆಯಲ್ಲಿ ಈಜಲು ನೀರಿಗಿಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕರು ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಇಬ್ಬರು ಬಾಲಕರು ಸುಂಟಿಕೊಪ್ಪದ ಪಂಪ್ಹೌಸ್ ನಿವಾಸಿಗಳಾದ ಸುಂಟಿಕೊಪ್ಪ ಆಟೋಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಮತ್ತು ಸರದಾರ್ ಎಂಬುವರುಗಳ ಪುತ್ರರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನೂರಾರು ಜನ ಜಮಾಯಿಸಿದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಸ್ಥಳೀಯ ಈಜು ತಜ್ಞರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕುಶಾಲನಗರ ಸಮುದಾಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ.
ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
18/01/2026 12:02 pm
LOADING...