ಮಡಿಕೇರಿ: ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಮಡಿಕೇರಿಯ ರಾಜಾಸೀಟು, ಪುಷ್ಪಕಾಶಿಯಂತೆ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ. ಅಲ್ಲಿ ಹೂವಿನ ಲೋಕವೇ ಧರೆಗಿಳಿದು ಬಂದಿದ್ದು, ಆ ಸೌಂದರ್ಯ ಕಣ್ತುಂಬಿಕೊಳ್ಳೋಕೆ ಎರಡು ಕಣ್ಣು ಸಾಲದು. ಲಕ್ಷಾಂತರ ಹೂಗಳಿಂದ ತಲೆಎತ್ತಿರುವ ಕಲಾಕೃತಿಗಳು, ಕಂಗೊಳಿಸುತ್ತಾ ಕೈಬೀಸಿ ಕರೆಯುತ್ತಿರುವ ಆ ಪುಷ್ಪರಾಶಿ, ಮಂಜಿನ ನಗರಿಗೆ ಹೂವಿನ ಹೊದಿಕೆ ಹೊದಿಸಿದಂತೆ ಭಾಸವಾಗಿಸಿದೆ. ಹೇಗಿದೆ ಆ ಹೂಲೋಕ ಅಂತೀರಾ..? ಇಲ್ಲಿದೆ ಒಂದು ಝಲಕ್...
ಮಂಜಿನನಗರಿ ಮಡಿಕೇರಿಯ ರಾಜಾಸೀಟ್ಗೆ ವಿಶೇಷ ಮೆರುಗುಬಂದಿದೆ. ವರ್ಷಕ್ಕೊಮ್ಮೆ ಆಗಮಿಸೋ ಅತಿಥಿಗಳು ಅವ್ರು ಬೇರಾರು ಅಲ್ಲ ಸುವಾಸನೆ ಬೀರುತ್ತಾ, ಪುಷ್ಪರಾಶಿ ಕಂಗೊಳಿಸುತ್ತಿವೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ 'ಫಲಪುಷ್ಪ ಪ್ರದರ್ಶನ' ಕಣ್ಮನ ಸೆಳೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ 'ಫಲಪುಷ್ಪ ಪ್ರದರ್ಶನ'ವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ 33 ಅಡಿ ಎತ್ತರದಲ್ಲಿ 18 ಅಡಿ ಉದ್ದ, 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾದ ಕೊಡಗಿನ ಪ್ರಸಿದ್ದ ಶ್ರೀ ಭಗಂಡೇಶ್ವರ ದೇವಸ್ಥಾನದ ಕಲಾಕೃತಿ ನೋಡುಗರನ್ನು ಸೆಳೆಯುತ್ತಿವೆ. ನೂರಾರು ಬಗೆಯ ಹೂಗಳು ಪುಷ್ಪಪ್ರಿಯರ ಮನತಣಿಸಿದರೆ, ಹೂಗಳಿಂದ, ತರಕಾರಿಗಳಿಂದ ರಚಿತವಾಗಿರುವ ವಿವಿಧ ಕಲಾಕೃತಿಗಳು ಜನಾಕರ್ಷಿಸುತ್ತಿವೆ.
ಸುಮಾರು 8 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್ಗಳಲ್ಲಿ ಸುಮಾರು 20 ಸಾವಿರ ವಿವಿಧ ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ. ಭಾರತ ಏಕೀಕರಣದ ಸಂಕೇತವಾಗಿ ಕನ್ನಡ ಅಕ್ಷರಗಳ ಕಲಾಕೃತಿ, ತಬಲಾ, ಪಿಯಾನೊ ಹರ್ಪ್, ಗಣರಾಜ್ಯೋತ್ಸವದ ಅಂಗವಾಗಿ ಅಮರ್ ಜವಾನ್, ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಟೈಡರ್ ಮ್ಯಾನ್, ಬ್ಲೂವೇ, ಮಿಕ್ಕಿ ಮೌಸ್, ಡೊರೇಮ್ಯಾನ್ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
PublicNext
25/01/2026 06:01 pm