ಸೋಮವಾರಪೇಟೆ : ರಸ್ತೆ ಅವ್ಯವಸ್ಥೆ ಖಂಡಿಸಿ ಮಂಡಲ ಬಿ. ಜೆ.ಪಿ ಬಾಳೆಗಿಡ ನೆಟ್ಟು,ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ನಡೆದಿದೆ.
ಸೋಮವಾರಪೇಟೆ ಅಲೆಕಟ್ಟೆ ರಸ್ತೆಯ ಮೂಲಕ ಹಾದುಹೋಗುವ ಕೂತಿ,ತೋಳೂರು ಶೆಟ್ಟಳ್ಳಿ ರಾಜ್ಯಹೆದ್ದಾರಿ 20ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಕಳೆದ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿದ್ದು ಅಂದಿನಿಂದಲೂ ಆಮೆಗತಿಯಲ್ಲಿ ನಡೆಯುತ್ತಿತ್ತಾದರೂ ಮಳೆಗಾಲದ ನಂತರ ಸಂಪೂರ್ಣ ನಿಂತುಹೋಗಿದೆ.
ರಸ್ತೆಗಳನ್ನು ಅಗೆದು ಹಾಕಿರುವುದರಿಂದ ವಾಹನಗಳು ಚಲಿಸಲು ತೊಂದರೆ ಆಗುತ್ತಿರುವುದರೊಂದಿಗೆ ಇಡೀ ವಾತಾವರಣ ದೂಳುಮಯವಾಗಿದೆ ರಸ್ತೆಯ ಅಕ್ಕಪಕ್ಕದ ಮನೆಯವರು ವಾಸಮಾಡಲು ಕಷ್ಟವಾಗಿದೆ ಎಂದು ಆರೋಪಿಸಿ ಇಂದು ಅಲೆಕಟ್ಟೆ ರಸ್ತೆಯ ಸಾಂದೀಪನಿ ಶಾಲೆ ಜಂಕ್ಷನ್ ಬಳಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಾಳೆಗಿಡನೆಟ್ಟು,ರಸ್ತೆತಡೆ ನಡೆಸಿದ್ದಾರೆ.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾ ಪಟ್ಟು ಹಿಡಿದ ಹಿನ್ನಲೆಯಲ್ಲಿ ತಡವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಭಿಯಂತರ ಕುಮಾರ್ ರವರನ್ನು ಪ್ರತಿಭಟನಾಕಾರರು ತೀವ್ರತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಪ್ರತಿಕ್ರಿಯಿಸಿದ ಅಭಿಯಂತರರು ರಸ್ತೆ ನಿರ್ಮಾಣಕ್ಕೆ ಕೆಲವು ಮರಗಳು ತೊಡಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ ಅಲ್ಲದೆ ಗುತ್ತಿಗೆದಾರರಿಗೆ ಸ್ವಲ್ಪವೂ ಬಿಲ್ ಪಾವತಿ ಆಗದಿರುವುದರಿಂದ ಅವರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ತಿಂಗಳ 20 ನೇ ತಾರೀಕಿನೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ನೀಡಿದ ಗಡುವಿನೊಳಗೆ ಕಾಮಗಾರಿ ನಡೆಯದಿದ್ದರೆ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.
Kshetra Samachara
02/02/2026 04:35 pm
LOADING...