ಮಡಿಕೇರಿ: ಕೇಂದ್ರ ವಿತ್ತ ಸಚಿವರು ಮಂಡಿಸಿರುವ ಮುಂಗಡಪತ್ರವು 'ವಿಕಸಿತ ಭಾರತ' ಪರಿಕಲ್ಪನೆಯಡಿ ರೂಪಿತವಾಗಿದ್ದು, ದೂರದೃಷ್ಟಿಯ ಹಾಗೂ ಸರ್ವವ್ಯಾಪಿ ಸ್ವರೂಪದಲ್ಲಿದೆ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದು ವಿರೋಧ ಪಕ್ಷಗಳು ಟೀಕಿಸುವಂತೆ ಕೇವಲ ಚುನಾವಣಾ ಪೂರ್ವದ ಬಜೆಟ್ ಅಲ್ಲ. ಬದಲಾಗಿ ಕೃಷಿ, ಶಿಕ್ಷಣಕ್ಕೆ ಒತ್ತು ನೀಡುವ, ಅದರಲ್ಲೂ ಪ್ರಮುಖವಾಗಿ ಯುವ ಸಮೂಹವನ್ನು ತಲುಪುವ ಮಹತ್ವದ ಮುಂಗಡಪತ್ರವಾಗಿದೆ," ಎಂದು ಪ್ರತಿಪಾದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಕರ್ನಾಟಕಕ್ಕೆ 'ಚೆಂಬು' ಎಂದು ಟೀಕಿಸಿರುವುದು ಕೇವಲ ಟೀಕೆಗೋಸ್ಕರ ಮಾಡಿರುವ ವ್ಯರ್ಥ ಟೀಕೆ ಎಂದು ಬೋಪಯ್ಯ ವ್ಯಂಗ್ಯವಾಡಿದರು.
ಬೆಂಗಳೂರಿಗೆ ವಿಶೇಷ ಅನುದಾನ
ಕೇಂದ್ರ ಮುಂಗಡಪತ್ರದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೆ, ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್ ಸಂಪರ್ಕಿಸುವ ಹೈಸ್ಪೀಡ್ ರೈಲ್ವೆ ಯೋಜನೆಗಳನ್ನು ಘೋಷಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಈ ಮುಂಗಡಪತ್ರವು ಸಮಗ್ರ ಭಾರತದ ಪರಿಕಲ್ಪನೆಯಡಿ ರೂಪಿತವಾಗಿದೆ ಎಂದು ಬೋಪಯ್ಯ ಬಣ್ಣಿಸಿದರು.
ಈಶಾನ್ಯ ರಾಜ್ಯಗಳಿಗೆ ಆದ್ಯತೆ
ಮುಂಗಡಪತ್ರದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದಕ್ಕೆ ಕಾರಣ, ಈಶಾನ್ಯ ರಾಜ್ಯಗಳಲ್ಲಿ ತಲಾ ಆದಾಯ ಅತ್ಯಂತ ಕಡಿಮೆ ಇರುವುದು ಮಾತ್ರವಲ್ಲದೆ, ಅಲ್ಲಿನ ಜನರಲ್ಲಿ 'ನಾವು ಭಾರತೀಯರು' ಎಂಬ ಮನಸ್ಥಿತಿಯನ್ನು ಮೂಡಿಸಿ, ರಾಷ್ಟ್ರೀಯ ಭಾವನೆಗಳನ್ನು ಬಿತ್ತುವ ಪ್ರಯತ್ನವನ್ನೂ ಮಾಡಲಾಗಿದೆ ಎಂದು ಕೆ.ಜಿ. ಬೋಪಯ್ಯ ವಿವರಿಸಿದರು.
PublicNext
03/02/2026 06:20 am
LOADING...