ತುಮಕೂರು : - ರಾಜಧಾನಿ ಬೆಂಗಳೂರಿನ ಬೆನ್ನಲ್ಲೇ ಈಗ ತುಮಕೂರಿನಲ್ಲೂ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡಾಸ್ತ್ರ ಪ್ರಯೋಗಿಸಿದ್ದಾರೆ. ನಗರದ ಸ್ವಚ್ಛತೆಗೆ ಅಡ್ಡಿಪಡಿಸಿ, ಎಲ್ಲೆಂದರಲ್ಲಿ ಕಸ ಎಸೆಯುವ ನಾಗರಿಕರಿಗೆ ಪಾಲಿಕೆ ಸಿಬ್ಬಂದಿ ಬಿಸಿ ಮುಟ್ಟಿಸುತ್ತಿದ್ದು, ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 6 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ನಗರದ ವಾರ್ಡ್ ಸಂಖ್ಯೆ 11 ಮತ್ತು 13ರ ವ್ಯಾಪ್ತಿಯ ಮೆಳೇಕೋಟೆ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಭಾಗದ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಮನಬಂದಂತೆ ಕಸ ಎಸೆದು ಹೋಗುತ್ತಿದ್ದರು. ಇದರಿಂದ ಇಡೀ ಪ್ರದೇಶ ದುರ್ನಾತ ಬೀರುತ್ತಿದ್ದಲ್ಲದೆ, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿತ್ತು. ರಸ್ತೆ ಪಕ್ಕದ ಖಾಲಿ ಜಾಗವನ್ನೇ ಡಂಪಿಂಗ್ ಯಾರ್ಡ್ ಮಾಡಿಕೊಂಡಿದ್ದ ನಿವಾಸಿಗಳ ಮೇಲೆ ನಿಗಾ ಇಟ್ಟಿದ್ದ ಪಾಲಿಕೆ ಸಿಬ್ಬಂದಿ, ಕಸ ಹಾಕುತ್ತಿದ್ದವರನ್ನು ಸ್ಥಳದಲ್ಲೇ ಹಿಡಿದು ದಂಡ ವಿಧಿಸಿದ್ದಾರೆ.. ಕಸ ಹಾಕಿದ ನಾಗರಿಕರಿಗೆ 6 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಪಾಲಿಕೆ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಂಡ ವಿಧಿಸುವುದರ ಜೊತೆಗೆ, ರಸ್ತೆ ಬದಿ ಕಸ ಹಾಕುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ನಿವಾಸಿಗಳಲ್ಲಿ ಅರಿವು ಮೂಡಿಸಲಾಯಿತು. ಮನೆ ಬಾಗಿಲಿಗೆ ಬರುವ ಕಸದ ಗಾಡಿಗಳಿಗೇ ತ್ಯಾಜ್ಯ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟ ಸಿಬ್ಬಂದಿ, ಮುಂದಿನ ದಿನಗಳಲ್ಲಿ ಕಸ ಎಸೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಪಾಲಿಕೆಯ ಈ ದಿಢೀರ್ ಕಾರ್ಯಾಚರಣೆಯಿಂದ ಕಸ ಹಾಕುವ ಮಂದಿ ಈಗ ಬೆಚ್ಚಿಬಿದ್ದಿದ್ದಾರೆ.
PublicNext
07/03/2026 10:07 am
LOADING...