ಹಾವೇರಿ: ಜಿಲ್ಲಾ ಕೇಂದ್ರದಲ್ಲಿ ಅಡುಗೆ ಅನಿಲದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಸಾರ್ವಜನಿಕರ ಸಂಕಷ್ಟ ಹೇಳತೀರದಾಗಿದೆ. ಇಲ್ಲಿನ ಹೆಚ್.ಪಿ. ಗ್ಯಾಸ್ ಪೂರೈಸುವ ಏಜೆನ್ಸಿಯು ಸೋಮವಾರ ಏಕಾಏಕಿ 'ನೋ ಸ್ಟಾಕ್' (ದಾಸ್ತಾನು ಇಲ್ಲ) ಎಂದು ಬೋರ್ಡ್ ಹಾಕಿರುವುದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಿಲಿಂಡರ್ ಪಡೆಯುವ ಆಸೆಯಿಂದ ನಸುಕಿನಲ್ಲೇ ದೂರದ ಹಳ್ಳಿಗಳಿಂದ ಬಂದಿದ್ದ ನೂರಾರು ಗ್ರಾಹಕರು ಅಸಹಾಯಕರಾಗಿ ನಿಲ್ಲುವಂತಾಯಿತು. ಕಳೆದ ಕೆಲವು ದಿನಗಳಿಂದ ಏಜೆನ್ಸಿಗೆ ಅಲೆದಾಡುತ್ತಿದ್ದರೂ, ಸಿಬ್ಬಂದಿ ಒಂದಲ್ಲ ಒಂದು ನೆಪ ಹೇಳಿ ವಾಪಸ್ ಕಳಿಸುತ್ತಿದ್ದರು. ಆದರೆ, ಇಂದು ನೇರವಾಗಿ 'ನೋ ಸ್ಟಾಕ್' ಬೋರ್ಡ್ ಹಾಕಿರುವುದು ಗ್ರಾಹಕರನ್ನು ರೊಚ್ಚಿಗೆಬ್ಬಿಸಿತು.
"ಮನೆಯಲ್ಲಿ ವೃದ್ಧರು, ರೋಗಿಗಳು ಹಾಗೂ ಬಾಣಂತಿಯರಿದ್ದಾರೆ. ಸಕಾಲಕ್ಕೆ ಅಡುಗೆ ಮಾಡಿ ನೀಡಲು ಸಿಲಿಂಡರ್ ಇಲ್ಲದೆ ಪರದಾಡುತ್ತಿದ್ದೇವೆ. ಏಜೆನ್ಸಿಯವರು ಪ್ರತಿಬಾರಿಯೂ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ" ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿ, ಏಜೆನ್ಸಿಯ ವಿರುದ್ಧ ಹಿಡಿಶಾಪ ಹಾಕಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಅಡುಗೆ ಅನಿಲದ ಸರಬರಾಜನ್ನು ಸುಗಮಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ
PublicNext
31/03/2026 08:20 am
LOADING...