ಲಕ್ನೋ: ಉತ್ತರ ಪ್ರದೇಶದ ತುರ್ತು ಸೇವಾ ಸಹಾಯವಾಣಿ 'UP 112' ನಲ್ಲಿ ಹಗಲಿರುಳು ಶ್ರಮಿಸುವ ಮಹಿಳಾ ಗುತ್ತಿಗೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ಬಲವಂತವಾಗಿ ಹತ್ತಿಕ್ಕಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ನ್ಯಾಯಯುತ ಸಂಬಳ ಮತ್ತು ಉತ್ತಮ ಕೆಲಸದ ವಾತಾವರಣಕ್ಕಾಗಿ ಮುಖ್ಯಮಂತ್ರಿಗಳ ಕಚೇರಿಯತ್ತ ಮೆರವಣಿಗೆ ಹೊರಟಿದ್ದ ನೂರಾರು ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಬ್ಯಾರಿಕೇಡ್ಗಳನ್ನು ಬಳಸಿ ತಡೆದು, ಬಸ್ಗಳಲ್ಲಿ ತುಂಬಿ ಕರೆದೊಯ್ದಿದ್ದಾರೆ.
ಇಡೀ ರಾಜ್ಯದ ತುರ್ತು ಕರೆಗಳನ್ನು ಸ್ವೀಕರಿಸಿ, ಸಂಕಷ್ಟದಲ್ಲಿರುವವರಿಗೆ ತಕ್ಷಣದ ನೆರವು ಸಿಗುವಂತೆ ಮಾಡುವ ಈ ಮಹಿಳಾ ಆಪರೇಟರ್ಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಆರಂಭದಲ್ಲಿ 15,000 ರೂ.ಗಳಿಗಿಂತ ಹೆಚ್ಚು ಸಂಬಳದ ಭರವಸೆ ನೀಡಲಾಗಿತ್ತು. ಆದರೆ ಪ್ರಸ್ತುತ ಇವರಿಗೆ ಸಿಗುತ್ತಿರುವುದು ಕೇವಲ 7,000 ದಿಂದ 15,000 ರೂ. ಮಾತ್ರ.
ಈ ಅಲ್ಪ ಮೊತ್ತದ ಸಂಬಳವೂ ಕೂಡ ಸರಿಯಾದ ಸಮಯಕ್ಕೆ ಕೈ ಸೇರುತ್ತಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಫ್ಟ್ಗಳ ಆಧಾರದ ಮೇಲೆ ದಿನದ 24 ಗಂಟೆಯೂ ಕೆಲಸ ಮಾಡುವ ಇವರಿಗೆ ಯಾವುದೇ ಭದ್ರತೆ ಅಥವಾ ಸೌಲಭ್ಯಗಳಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಬೆನ್ನೆಲುಬಾಗಿ ನಿಲ್ಲುವವರೇ ಇಂದು ರಸ್ತೆಗೆ ಬಂದು ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. "ಇತರರ ಕಷ್ಟಕ್ಕೆ ಸ್ಪಂದಿಸುವ ಇವರ ಕಷ್ಟವನ್ನು ಸರ್ಕಾರ ಯಾಕೆ ಕೇಳಿಸಿಕೊಳ್ಳುತ್ತಿಲ್ಲ?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪ್ರತಿಭಟನಾ ನಿರತ ಮಹಿಳೆಯರನ್ನು ಪೊಲೀಸರು ತಡೆದ ರೀತಿ ಮತ್ತು ಅವರ ಮೇಲಿನ ದರ್ಪದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನ್ಯಾಯಕ್ಕಾಗಿ ಹೋರಾಡಲು ಹೊರಟ ಮಹಿಳೆಯರನ್ನು ಬಂಧಿಸುವ ಮೂಲಕ ಸರ್ಕಾರ ಅವರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.
PublicNext
03/04/2026 04:47 pm