ಬರ್ವಾನಿ (ಮಧ್ಯಪ್ರದೇಶ) : ಪೆಟ್ರೋಲ್ ಕೊರತೆಯ ವದಂತಿಗಳ ನಡುವೆ ಹೆಚ್ಚಿದ ಸಾರ್ವಜನಿಕ ಅಸಹನೆ ಹಿಂಸಾಚಾರಕ್ಕೆ ತಿರುಗಿದ್ದು, ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮುಖಕ್ಕೆ ಪೆಟ್ರೋಲ್ ಟ್ಯಾಂಕ್ ಮುಚ್ಚಳದಿಂದ ಹಲ್ಲೆ ಮಾಡಲಾಗಿದೆ.
ಹೌದು ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಜುಲ್ವಾನಿಯಾ ಪೆಟ್ರೋಲ್ ಪಂಪ್ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪೆಟ್ರೋಲ್ ಪಡೆಯಲು ಮುಗಿಬಿದ್ದಿದ್ದ ಜನರನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಅಖಿಲೇಶ್ ಚೌಹಾಣ್ ಅವರ ಮೇಲೆ ಬೈಕ್ ಸವಾರನೊಬ್ಬ ದಾಳಿ ಮಾಡಿದ್ದಾನೆ. ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದ್ದಕ್ಕೆ ಕುಪಿತಗೊಂಡ ಬೈಕ್ ಸವಾರ, ಕಾನ್ಸ್ಟೇಬಲ್ ಅಖಿಲೇಶ್ ಚೌಹಾಣ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ವಾಗ್ವಾದ ತೀವ್ರಗೊಂಡಾಗ, ಬೈಕ್ ಸವಾರ ತನ್ನ ಬೈಕ್ನ ಪೆಟ್ರೋಲ್ ಟ್ಯಾಂಕ್ ಮುಚ್ಚಳವನ್ನು ಕಿತ್ತು ನೇರವಾಗಿ ಕಾನ್ಸ್ಟೇಬಲ್ ಮುಖಕ್ಕೆ ಎಸೆದಿದ್ದಾನೆ.
ಏಕಾಏಕಿ ನಡೆದ ಈ ದಾಳಿಯಿಂದ ಕಾನ್ಸ್ಟೇಬಲ್ ಮುಖಕ್ಕೆ ತೀವ್ರ ಗಾಯಗಳಾಗಿವೆ. ಗಾಯಗೊಂಡ ಕಾನ್ಸ್ಟೇಬಲ್ ನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿಯ ನಂತರ, ಆರೋಪಿ ತನ್ನ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇಂಧನಕ್ಕಾಗಿ ಪೆಟ್ರೋಲ್ ಬಂಕ್ಗಳಲ್ಲಿ ಕಿಲೋಮೀಟರ್ಗಟ್ಟಲೆ ಸಾಲು ನಿಲ್ಲುತ್ತಿರುವುದು ಜನರ ತಾಳ್ಮೆ ಕೆಡಿಸುತ್ತಿರುವ ಈ ಸಂದರ್ಭದಲ್ಲಿ, ಕರ್ತವ್ಯನಿರತ ಪೊಲೀಸರ ಮೇಲಿನ ಈ ದಾಳಿಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
PublicNext
04/04/2026 01:17 pm