ಇಂಡೋನೇಷ್ಯಾದ ಜಾಕಾರ್ತಾದಲ್ಲಿ ಮನುಷ್ಯತ್ವವನ್ನೇ ಮರೆತ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಹಡೆದ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶುವೊಂದನ್ನು ಕಸದಂತೆ ಚರಂಡಿಗೆ ಎಸೆದಿದ್ದಾರೆ. ಈ ಕೃತ್ಯವೆಸಗಿದ್ದು ತಾಯಿಯೇ ಅಥವಾ ಪೋಷಕರೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಇಂದು ಜಗತ್ತಿನಲ್ಲಿ ಮಕ್ಕಳಿಲ್ಲದೆ ದತ್ತು ಪಡೆಯಲು ಕಾಯುತ್ತಿರುವ ಅದೆಷ್ಟೋ ಜನರಿದ್ದಾರೆ. ಆದರೆ, ಈ ಘಟನೆಯಲ್ಲಿ ಮಗು ಹುಟ್ಟಿದ ತಕ್ಷಣ ಯಾವುದೇ ಕರುಣೆ ತೋರದೆ, ಕೊಳಕು ಚರಂಡಿ ನೀರಿನಲ್ಲಿ ಎಸೆಯಲಾಗಿದೆ. ಮಗುವಿನ ಅಳು ಕೇಳಿದ ಸ್ಥಳೀಯರು ಆ ಕಡೆಗೆ ಧಾವಿಸಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಇನ್ನೂ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಈ ಅಮಾನವೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಈ ಪುಟ್ಟ ಜೀವ ಮಾಡಿದ ತಪ್ಪಾದರೂ ಏನು? ಎಸೆಯುವ ಬದಲು ಯಾವುದಾದರೂ ಅನಾಥಾಶ್ರಮಕ್ಕೆ ಅಥವಾ ಆಸ್ಪತ್ರೆಗೆ ಬಿಡಬಹುದಿತ್ತಲ್ಲವೇ?" ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಅದೃಷ್ಟವಶಾತ್, ಸ್ಥಳೀಯರ ಸಮಯಪ್ರಜ್ಞೆಯಿಂದ ಮಗುವನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗುವನ್ನು ಎಸೆದ ಪಾಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
PublicNext
03/04/2026 04:04 pm
LOADING...