ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಹಾಗೂ ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪೆರಂಬೂರ್ ಮತ್ತು ತಿರುಚಿ ಪೂರ್ವ ವಿಧಾನಸಭಾ ಕ್ಷೇತ್ರಗಳಿಗೆ ಪರಿಷ್ಕೃತ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಹಿಂದಿನ ನಾಮಪತ್ರಗಳಲ್ಲಿ ಕಂಡುಬಂದ ಕೆಲವು ಮಾಹಿತಿ ವ್ಯತ್ಯಾಸಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ವಿಜಯ್, ತಮ್ಮ ಪರಿಷ್ಕೃತ ನಾಮಪತ್ರಗಳಲ್ಲಿ ತಮ್ಮ ವಿರುದ್ಧ ಎರಡು ಪ್ರಕರಣಗಳು ಬಾಕಿ ಇರುವುದಾಗಿ ಘೋಷಿಸಿದ್ದಾರೆ.
ಮಾರ್ಚ್ 30ರಂದು ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ನಿಯಮ ಉಲ್ಲಂಘಿಸಿ ಪ್ರಚಾರ ನಡೆಸಿದ ಆರೋಪದ ಮೇಲೆ ಕೊಲತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪೆರವಲ್ಲೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣ ಮಧುರೈ ಜಿಲ್ಲೆಯ ಕೂಡಕೋವಿಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, 2025ರ ಆಗಸ್ಟ್ನಲ್ಲಿ ನಡೆದ ಟಿವಿಕೆಯ ಎರಡನೇ ಸಮ್ಮೇಳನದ ವೇಳೆ ರ್ಯಾಂಪ್ ಮೇಲೆ ಹತ್ತಿದ ಬೆಂಬಲಿಗರನ್ನು ಭದ್ರತಾ ಸಿಬ್ಬಂದಿ ತಳ್ಳಿದ ಪರಿಣಾಮ ಗಾಯಗಳಾಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದೆ.
ಪರಿಷ್ಕೃತ ನಾಮಪತ್ರಗಳಲ್ಲಿ ವಿಜಯ್ ಅವರ ವಯಸ್ಸಿನ ವಿವರಗಳನ್ನು ತಿದ್ದುಪಡಿ ಮಾಡಲಾಗಿದೆ. ಜೊತೆಗೆ, ಜಯ ನಗರ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ನಲ್ಲಿ ಅವರು ಹೊಂದಿರುವ ಷೇರುಗಳ ಮೌಲ್ಯವನ್ನು ನವೀಕರಿಸಲಾಗಿದೆ. ಅವರ ಪತ್ನಿ ಸಂಗೀತಾ ಅವರ ಹೆಸರಿನಲ್ಲಿರುವ ಬೆಳ್ಳಿಯ ಮೌಲ್ಯದಲ್ಲಿಯೂ ಪರಿಷ್ಕರಣೆ ಮಾಡಲಾಗಿದ್ದು, ವಿಜಯ್ ಹಾಗೂ ಅವರ ಪತ್ನಿಯ ಹೆಸರಿನಲ್ಲಿರುವ ಸ್ಥಿರ ಆಸ್ತಿಗಳ ಒಟ್ಟು ಅಂದಾಜು ಮಾರುಕಟ್ಟೆ ಮೌಲ್ಯವನ್ನೂ ಸರಿಪಡಿಸಲಾಗಿದೆ. ಇದಲ್ಲದೆ, ಅವರ ಪುತ್ರ ಜೇಸನ್ ಸಂಜಯ್ ಮತ್ತು ಮಗಳು ದಿವ್ಯಾ ಶಶಾ ಅವರ ಹೆಸರಿನಲ್ಲಿರುವ ಚರ ಆಸ್ತಿಗಳ ವಿವರಗಳನ್ನೂ ಪರಿಷ್ಕೃತ ನಾಮಪತ್ರಗಳಲ್ಲಿ ನವೀಕರಿಸಲಾಗಿದೆ.
PublicNext
05/04/2026 05:58 pm