ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಹೋರಾಟ ಇದೀಗ ಹೊಸ ತಿರುವು ಪಡೆದುಕೊಂಡಿದೆ.ಒಳಮೀಸಲಾತಿ ಪರ ಹೋರಾಟ ನಡೆಸುತ್ತಿದ್ದ ಕಾರ್ಯಕರ್ತನಿಗೆ ಫೇಸ್ಬುಕ್ ಪೋಸ್ಟ್ ವಿಚಾರವಾಗಿ ಮೆಸೆಂಜರ್ನಲ್ಲಿ ಅಶ್ಲೀಲವಾಗಿ ಧಮಕಿ ಹಾಕಿ, ಪೌರಕಾರ್ಮಿಕರ ಬಗ್ಗೆ ನಿಂದನೀಯ ಸಂದೇಶ ರವಾನಿಸಿದ್ದ ಕಾನ್ಸ್ಟೆಬಲ್ ಬೋರಯ್ಯ ಅವರನ್ನು ಅಮಾನತುಗೊಳಿಸಲಾಗಿದೆ.
ಒಳಮೀಸಲಾತಿ ಪರ ಸಕ್ರಿಯವಾಗಿ ಹೋರಾಟ ನಡೆಸುತ್ತಿರುವ ಉಮೇಶ್ ಎಂಬುವವರು ಇತ್ತೀಚೆಗೆ ಫೇಸ್ಬುಕ್ನಲ್ಲಿ ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೆಬಲ್ ಬೋರಯ್ಯ ಉಮೇಶ್ಗೆ ಮೆಸೆಂಜರ್ ಮೂಲಕ ಅಶ್ಲೀಲ ಮತ್ತು ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ್ದಾರೆ.
ಕಾನ್ಸ್ಟೆಬಲ್ ಬೋರಯ್ಯ ಅವರು ಉಮೇಶ್ಗೆ ಕಳುಹಿಸಿದ ಸಂದೇಶಗಳಲ್ಲಿ ಪೌರಕಾರ್ಮಿಕರ ಬಗ್ಗೆ ಅತ್ಯಂತ ಹೀನಾಯ ಪದಗಳನ್ನು ಬಳಸಿದ್ದಾರೆ. ನಿಮ್ಮವ್ರು ಕುಡಿದುಕೊಂಡು ಕೆಲಸಕ್ಕೆ ಬರ್ತಾರೆ, ಬೆಗ್ಗರ್ ನನ್ನ ಮಕ್ಕಳು ಅಕ್ಕ ತಂಗಿಯರನ್ನು ಕಳಿಸು, 500 ಅಲ್ಲ ಸಾವಿರ ಕೊಡುತ್ತೇನೆ. ಐದು ಲಕ್ಷ ಜನರೂ ಹಣ ಕೊಡುತ್ತಾರೆ, ನಿನ್ನ ತಾಯಿ ತಂಗಿಯನ್ನು ಕಳಿಸು" ಎಂಬಂತಹ ಅತ್ಯಂತ ನಿಂದನೀಯ, ಜಾತಿ ನಿಂದನೆ ಮತ್ತು ಬೆದರಿಕೆಯ ಮಾತುಗಳನ್ನು ಬರೆದಿದ್ದಾರೆ.
ಹೋರಾಟಗಾರ ಉಮೇಶ್ ದೂರು ನೀಡಿದ ತಕ್ಷಣವೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಇನ್ಸ್ಪೆಕ್ಟರ್ ಅವರು ಕಾನ್ಸ್ಟೆಬಲ್ ಬೋರಯ್ಯ ಅವರನ್ನು ತಕ್ಷಣವೇ ಅಮಾನತುಗೊಳಿಸಿ, ಘಟನೆ ಕುರಿತು ಡಿಸಿಪಿಗೆ ವರದಿಯನ್ನು ಸಲ್ಲಿಸಿದ್ದಾರೆ. ಸದ್ಯ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Kshetra Samachara
05/04/2026 08:59 pm