ಬಳ್ಳಾರಿ: ಬಳ್ಳಾರಿ ನಗರದ ಕೇಂದ್ರ ಬಸ್ ನಿಲ್ದಾಣದ ಬೈಕ್ ಪಾರ್ಕಿಂಗ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಮರವೊಂದು ಧರೆಗುರುಳಿದೆ. ಈ ಘಟನೆಯಿಂದಾಗಿ 20ಕ್ಕೂ ಹೆಚ್ಚು ಬೈಕ್ಗಳು ಜಖಂಗೊಂಡಿದ್ದು, ವಾಹನ ದುರಸ್ತಿ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಸವಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಹವಾಮಾನ ಬದಲಾವಣೆ ಮತ್ತು ತೆರವು ಕಾರ್ಯ
ಕಳೆದ ಒಂದು ವಾರದಿಂದ ಸುಡುತ್ತಿದ್ದ ತೀವ್ರ ಬಿಸಿಲಿನ ಬಳಿಕ ನಿನ್ನೆ ಸಂಜೆ ಹವಾಮಾನದಲ್ಲಿ ಏಕಾಏಕಿ ಬದಲಾವಣೆಯಾಗಿ, ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇದೇ ವೇಳೆ ಮರ ಬಿದ್ದು ಅನಾಹುತ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮರ ತೆರವು ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಜಖಂಗೊಂಡ ವಾಹನಗಳ ನಷ್ಟದ ಅಂದಾಜು ಕಾರ್ಯ ಇನ್ನೂ ಮುಂದುವರಿದಿದೆ.
ಜವಾಬ್ದಾರಿ ಯಾರದು? ಸವಾರರಲ್ಲಿ ಆತಂಕ
ಮರ ಬಿದ್ದು ಜಖಂಗೊಂಡಿರುವ ಹಲವು ಬೈಕ್ಗಳಿಗೆ ವಿಮೆ ಇಲ್ಲದ ಕಾರಣ, ಸವಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ವಾಹನಗಳ ದುರಸ್ತಿ ವೆಚ್ಚವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆ ಇದೀಗ ದೊಡ್ಡದಾಗಿ ಕಾಡುತ್ತಿದೆ. ಈ ಸಂಬಂಧ KSRTC ಅಧಿಕಾರಿಗಳು ಮತ್ತು ಪಾರ್ಕಿಂಗ್ ಗುತ್ತಿಗೆದಾರರ ನಡುವೆ ಜವಾಬ್ದಾರಿ ಕುರಿತು ಚರ್ಚೆಗಳು ನಡೆಯುತ್ತಿವೆ. "ಪಾರ್ಕಿಂಗ್ನಲ್ಲಿ ವಾಹನಗಳ ರಕ್ಷಣೆ ನಮ್ಮ ಜವಾಬ್ದಾರಿಯಾದರೂ, ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟಕ್ಕೆ ನಾವು ಜವಾಬ್ದಾರರಲ್ಲ" ಎಂದು ಪಾರ್ಕಿಂಗ್ ನಿರ್ವಾಹಕರು ಹೇಳಿಕೆ ನೀಡಿದ್ದಾರೆ. ಆದರೆ, "ಪಾರ್ಕಿಂಗ್ ಶುಲ್ಕವನ್ನು ಪಡೆಯುವವರು ವಾಹನಗಳ ನಷ್ಟವನ್ನೂ ಭರಿಸಬೇಕು" ಎಂದು ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.
ವರದಿ: ಹೊನ್ನುರಸ್ವಾಮಿ ಕೆ. ಟಿ, ಬಳ್ಳಾರಿ
PublicNext
22/04/2026 05:00 pm
LOADING...