ರಬಕವಿ-ಬನಹಟ್ಟಿ: ದಿನಂಪ್ರತಿ ಬೆವರು ಸುರಿಸಿ, ಹಗಲಿರುಳು ದುಡಿಯುತ್ತಾ ಶ್ರಮಿಸುವ ಜೀವಿಗಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮುಖಂಡ ಅರ್ಜುನ ಹಲಗಿಗೌಡರ ಹೇಳಿದರು. ಮಹಾಲಿಂಗಪೂರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಹಮ್ಮಿಕೊಂಡ ಸಂಘದ ವಾರ್ಷಿಕೋತ್ಸವ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೂಣಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಇಂದಿನ ದೊಡ್ಡ ದೊಡ್ಡ ಕಟ್ಟಡಗಳಿಗೆ ಕಾರ್ಮಿಕರ ಶ್ರಮವೇ ಸಾಕ್ಷಿಯಾಗಿದೆ. ಕ್ಷೇತ್ರದ ನೇಕಾರರನ್ನು ಸರ್ಕಾರವು ಕಾರ್ಮಿಕರೆಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನೇಕಾರ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಕಳೆದ ಒಂದು ದಶಕದಿಂದ ನೇಕಾರ ಸರ್ವಾಂಗೀಣ ಬೆಳವಣಿಗೆಗಾಗಿ ಹತ್ತುಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಹೋರಾಟಗಳ ಮೂಲಕ ಒತ್ತಾಯಿಸುತ್ತಾ ಬಂದಿದ್ದು, ವಿಧಾನಸಭೆಯಲ್ಲೂ ನೇಕಾರ ಪರ ಧ್ವನಿ ಕೇಳಿಬರುವಂತಾಗಿದೆ.. ರಾಜ್ಯದ ಎಲ್ಲಾ ನೇಕಾರರು ಶ್ರಮಿಕರಾಗಿದ್ದು, ಅವರನ್ನು ಕಾರ್ಮಿಕರೆಂದು ಘೋಷಿಸಬೇಕೆಂಬ ಬೇಡಿಕೆ ನಿರಂತರವಾಗಿದ್ದು, ಸರ್ಕಾರವು ಗಮನಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಗಪ್ಪ ಜಮಖಂಡಿ, ಪೈಗಂಬರ ಪೆಂಡಾರಿ, ಮನೋಹರ ಕಲಾಲ, ಪತ್ರಕರ್ತ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಸದಾಶಿವ ಗೊಂದಕರ, ರಾಜೇಂದ್ರ ಮಿರ್ಜಿ, ಸಂಗಪ್ಪ ಊದಗಟ್ಟಿ, ರಾಗು ಬೆಳಗಲಿ, ರಾಜು ಕುಕ್ಕುಗೋಳ, ರಮೇಶ ನಾಗರಾಳ, ರಾಜು ಹನಗಂಡಿ, ಶ್ರೀಶೈಲ ಮುಗಳಳ್ಳಿ, ಲಾಲಸಾಬ ನಗಾರ್ಜಿ, ಬಸವರಾಜ ಜಮಖಂಡಿ ಸೇರಿದಂತೆ ಅನೇಕರಿದ್ದರು. ಇದೆ ಸಂದರ್ಭದಲ್ಲಿ ನೇಕಾರ ಕಾರ್ಡಗಳನ್ನು ವಿತರಿಸಿ, ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು.
Kshetra Samachara
02/05/2026 05:43 pm