ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ಗಿಂತ ಹೆಚ್ಚಾಗಿ ಈಗ ಕೇವಲ ವ್ಯವಹಾರವಾಗಿ ಬದಲಾಗಿದೆ ಎಂದು ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಆಗಿದ್ದ ಮುತ್ತಯ್ಯ ಮುರಳೀಧರನ್ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ರನ್ಗಳ ಸುರಿಮಳೆಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಐಪಿಎಲ್ನ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ.
ಐಪಿಎಲ್ನಲ್ಲಿ ಸತತವಾಗಿ 200ಕ್ಕೂ ಅಧಿಕ ರನ್ಗಳು ದಾಖಲಾಗುತ್ತಿರುವುದಕ್ಕೆ ಪಿಚ್ಗಳೇ ಕಾರಣ ಎಂದು ಅವರು ನೇರವಾಗಿ ಹೇಳಿದ್ದಾರೆ. "ಐಪಿಎಲ್ ಈಗ ಸಂಪೂರ್ಣವಾಗಿ ವ್ಯವಹಾರದ ಮೇಲೆ ನಿಂತಿದೆ. ಪಂದ್ಯದಲ್ಲಿ ಸ್ಕೋರ್ ಕಡಿಮೆ ಇದ್ದರೆ ಅದು ಪ್ರಾಯೋಜಕರಿಗೆ (Sponsors) ಬೇಸರ ತರಿಸುತ್ತದೆ. ಹಾಗಾಗಿಯೇ ಬ್ಯಾಟರ್ಗಳಿಗೆ ಪೂರಕವಾದ ಫ್ಲ್ಯಾಟ್ ಪಿಚ್ಗಳನ್ನು ಸಿದ್ಧಪಡಿಸಲಾಗುತ್ತಿದೆ" ಎಂದು ಅವರು ವಿಶ್ಲೇಷಿಸಿದ್ದಾರೆ.
ಟಿ20 ಕ್ರಿಕೆಟ್ನ ಇಂದಿನ ಅಬ್ಬರದಲ್ಲಿ ಬೌಲರ್ಗಳ ಸ್ಥಿತಿ ಗಂಭೀರವಾಗಿದೆ ಎಂದು ಮುರಳಿ ಕಳವಳ ವ್ಯಕ್ತಪಡಿಸಿದ್ದಾರೆ.
"ಈ ವ್ಯವಸ್ಥೆಯಲ್ಲಿ ಬೌಲರ್ಗಳನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
13 ವರ್ಷದ ವೈಭವ್ ಸೂರ್ಯವಂಶಿಯಂತಹ ಪ್ರತಿಭಾನ್ವಿತ ಮಕ್ಕಳ ಎದುರು ಬೌಲಿಂಗ್ ಮಾಡುವುದು ಕೂಡ ಈಗ ಸವಾಲಿನ ಕೆಲಸ. "ಈಗಿನ ಬ್ಯಾಟಿಂಗ್ ತಂತ್ರಗಳ ಮುಂದೆ ನಾನೇ ಬೌಲಿಂಗ್ ಮಾಡಿದರೂ ಕಷ್ಟವಾಗುತ್ತಿತ್ತು" ಎಂದು ತಮ್ಮ ಅಸಹಾಯಕತೆಯನ್ನು ತಮಾಷೆಯಾಗಿ ಹಂಚಿಕೊಂಡಿದ್ದಾರೆ.
ಮನರಂಜನೆಯ ಹೆಸರಿನಲ್ಲಿ ಬೌಲರ್ಗಳ ಮೇಲೆ ಸವಾರಿ ಮಾಡಲಾಗುತ್ತಿದೆ ಎಂಬ ಚರ್ಚೆಗೆ ಮುರಳೀಧರನ್ ಅವರ ಈ ಹೇಳಿಕೆ ಹೊಸ ವೇದಿಕೆ ಒದಗಿಸಿದೆ. ಕೇವಲ ಬೌಂಡರಿ-ಸಿಕ್ಸರ್ಗಳೇ ಕ್ರಿಕೆಟ್ ಅಲ್ಲ, ಬೌಲಿಂಗ್ ಮತ್ತು ಬ್ಯಾಟಿಂಗ್ ನಡುವೆ ಸಮತೋಲನ ಇರಬೇಕು ಎಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
PublicNext
02/05/2026 08:47 pm