ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವ ನಿರ್ಧಾರವನ್ನು ದ.ಕ.ಜಿಲ್ಲಾಡಳಿತ ಕೈಗೊಂಡಿದೆ. ಇದರ ಬೆನ್ನಲ್ಲೇ ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ನಿಯೋಗ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ನೀರಿನ ಕೃತಕ ಅಭಾವ ಸೃಷ್ಟಿಸುತ್ತಿರುವ ಗಂಭೀರ ಆರೋಪ ಮಾಡಿದ್ದಾರೆ.
ನೇತ್ರಾವತಿ ನದಿಯ ನೀರಿನ ಒಳಹರಿವು ನಿಂತಿದ್ದು, ಬಿಸಿಲ ಧಗೆ ಏರಿಕೆಯಾಗಿದ್ದರಿಂದ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರು ಪೂರೈಕೆಗೆ ರೇಷನಿಂಗ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಶಾಸಕ ವೇದವ್ಯಾಸ ಕಾಮತ್ ಖುದ್ದು ತುಂಬೆ ವೆಂಟೆಡ್ ಡ್ಯಾಂಗೆ ತೆರಳಿ ಪರಿಶೀಲನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಗರಂ ಆಗಿದ್ದಾರೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್ಗೆ ಇಳಿಕೆಯಾಗುವ ಮೂಲಕ ನಗರದಲ್ಲಿ ಕೃತಕ ಜಲಕ್ಷಾಮ ಸೃಷ್ಟಿಸಲಾಗಿದೆ. ರೇಷನಿಂಗ್ ನಿರ್ಧಾರ ಕೈಗೊಳ್ಳುವ ಮೊದಲು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮನಪಾ ಅಧಿಕಾರಿಗಳು ಸ್ಥಳೀಯ ಇಬ್ಬರು ಶಾಸಕರಿಗೆ ತಿಳಿಸಿಲ್ಲ. ನಿಜವಾಗಿಯೂ ನೀರಿನ ಯಾವ ಸಮಸ್ಯೆಯೂ ಇಲ್ಲ. ಇದು ಜಿಲ್ಲಾಡಳಿತ, ಕಾಂಗ್ರೆಸ್ ಸರಕಾರ ಸೇರಿ ನೀರಿನ ಕೃತಕ ಸೃಷ್ಟಿಸುತ್ತಿದೆ. ವಾಸ್ತವದಲ್ಲಿ ಆಪತ್ಕಾಲದ ಬಳಕೆಗೆ ಇರುವ ಎಎಂಆರ್ ಡ್ಯಾಮ್ನಲ್ಲಿ ಸಾಕಷ್ಟು ನೀರು ಇದೆ. ಇದರ ನೀರನ್ನು ತುಂಬೆಗೆ ಹರಿಸಿದ್ದಲ್ಲಿ ತುಂಬೆ ನೀರಿನ ಮಟ್ಟ 6 ಮೀಟರ್ವರೆಗೆ ಏರಿಕೆಯಾಗುತ್ತದೆ. ಹೀಗೆ ದಿನನಿತ್ಯ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನ ನೀರು ನಗರ ವ್ಯಾಪ್ತಿಗೆ 55 ದಿನಗಳವರೆಗೆ ಬಳಕೆ ಮಾಡಲು ಸಾಧ್ಯ ಎಂದಿದ್ದಾರೆ.
ಇದೇ ಮಾದರಿಯಲ್ಲಿ ಬಿಜೆಪಿಯು ಹಿಂದಿನ ಪಾಲಿಕೆಯ ಆಡಳಿತದಲ್ಲಿ ಮಾಡಿ ತೋರಿಸಿರುವಾಗ, ಕುಡಿಯುವ ನೀರಿನ ವಿಚಾರದಲ್ಲಿ ಜನರನ್ನು ವಂಚನೆಗೊಳಿಸುವುದು ಎಷ್ಟು ಸರಿ.? ತಕ್ಷಣ ಎಎಂಆರ್ ಡ್ಯಾಮ್ನಿಂದ ನೀರು ಬಿಡಬೇಕೆಂದು ಶಾಸಕರು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಈ ಬಗ್ಗೆ ಮಾತನಾಡಿ ಈಗಾಗಲೇ ಜಿಲ್ಲಾಡಳಿತ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಬೇಕಿತ್ತು. ಕೊನೆಯ ಕ್ಷಣ ತುಂಬೆ ಡ್ಯಾಂನಲ್ಲಿ ನೀರು ಖಾಲಿಯಾಗುವ ಸಂದರ್ಭ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸಿರುವುದು ತಪ್ಪು. ಜನತೆ ಕಾರು, ಅಂಗಳ ತೊಳೆಯಲು, ಕಟ್ಟಡ ಕಾಮಗಾರಿ ಸೇರಿದಂತೆ ಇನ್ನಿತರ ವಿಚಾರಗಳಿಗೆ ಅನಗತ್ಯ ಕುಡಿಯುವ ನೀರನ್ನು ಪೋಲು ಮಾಡುತ್ತಿದ್ದಾರೆ. ಆದ್ದರಿಂದ ಇಂಥವರ ಮೇಲೆ ತಕ್ಷಣ ಕ್ರಮ ಆಗಲಿ ಎಂದರು.
PublicNext
04/05/2026 05:52 pm