ಮಣಿಪಾಲ: ಜಿಲ್ಲೆಯಲ್ಲಿ ಹಾದುಹೋಗುವ ರಾ. ಹೆ. ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರೈಸಬೇಕು ಮತ್ತು ಮಳೆಗಾಲ ಪೂರ್ವ ಕಾಮಗಾರಿಯನ್ನು ಕೈಗೊಳ್ಳಬೇಕು. ಹೆದ್ದಾರಿ ಬದಿಯಲ್ಲಿ ಲಾರಿ ಸಹಿತ ಇತರ ವಾಹನ ಅನಗತ್ಯ ನಿಲುಗಡೆ ತಪ್ಪಿಸಿ ಅಪಘಾತ ಪ್ರಮಾಣ ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಡಾ| ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾ. ಹೆ.ಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ರಸ್ತೆ ಸುರಕ್ಷೆ ಬಗ್ಗೆ ಜನಜಾಗೃತಿ ಮೂಡಿಸಬೇಕು. ಹೆದ್ದಾರಿ ಬದಿ ಅನಗತ್ಯವಾಗಿ ವಾಹನ ನಿಲುಗಡೆ ತಪ್ಪಿಸಬೇಕು ಎಂದರು.
ಕುಂದಾಪುರ ಸಂಗಮ್ ವೃತ್ತದ ಸಮಸ್ಯೆ, ಕಲ್ಮಾಡಿ ಸೇತುವೆ ಸಮಸ್ಯೆ, ಅರಾಟಿ ಮುಳ್ಳಿಕಟ್ಟಿ ಸೇತುವೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದರು.
ಮನೆ ಮನೆಗೆ ಗ್ಯಾಸ್ ಸಂಪರ್ಕ ನೀಡುವ ಯೋಜನೆ 10 ವರ್ಷಗಳಾದರೂ ಬಾಕಿ ಉಳಿದಿದೆ. ಇನ್ನೂ ಸಾಧ್ಯವಾಗಿಲ್ಲ ಯಾಕೆ ಎಂದು ಗ್ಯಾಸ್ ಪೂರೈಕೆ ಸಂಸ್ಥೆಯ ಪ್ರತಿನಿಧಿಗಳನ್ನು ಪ್ರಶ್ನಿಸಿದರು. ಜೂ. 15ರೊಳಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ಗ್ಯಾಸ್ ಪೂರೈಸಬೇಕು ಎಂದ ಅವರು, ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ ಬಿಎಸ್ಎನ್ಎಲ್ ಸಿಗ್ನಲ್ ಸಿಗುತ್ತಿಲ್ಲ ಎಂಬ ದೂರುಗಳಿವೆ. ಅದನ್ನು ತತ್ಕ್ಷಣವೇ ಪರಿಹರಿಸಬೇಕು ಎಂದರು.
ಬ್ರಹ್ಮಾವರ ತಾಲೂಕಿನಲ್ಲಿ ಇ.ಎಸ್.ಐ. ಆಸ್ಪತ್ರೆಗೆ 2.5 ಕೋ. ರೂ. ಮಂಜೂರಾಗಿದ್ದು, ಶೀಘ್ರ ಅನುಷ್ಠಾನವಾಗಬೇಕು. ಈ ಕುರಿತ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನಿರ್ದೇಶಿಸಿದರು.
Kshetra Samachara
04/05/2026 01:20 pm
LOADING...