ಚೆನ್ನೈ: ನಟ ವಿಜಯ್ ಅವರ ಹೊಸ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಚುನಾವಣೆಯಲ್ಲಿ ಗೆಲುವು ಸಾಧಿಸುವ ಬಗ್ಗೆ ಅವರಿಗೆ ಕಿಂಚಿತ್ತೂ ಅನುಮಾನವಿರಲಿಲ್ಲ ಎಂದು ಅವರ ತಂದೆ, ಹಿರಿಯ ನಿರ್ದೇಶಕ ಎಸ್. ಎ. ಚಂದ್ರಶೇಖರ್ ಹೇಳಿದ್ದಾರೆ.
ಟಿವಿಕೆ ಪಕ್ಷದ ಮುನ್ನಡೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್, "ಒಬ್ಬ ತಂದೆಯಾಗಿ ನನಗೆ ಅತೀವ ಹೆಮ್ಮೆ ಮತ್ತು ಸಂತೋಷವಾಗಿದೆ. ಕಳೆದ ಎರಡು ವರ್ಷಗಳಿಂದ ನನ್ನ ಮಗನ ಆತ್ಮವಿಶ್ವಾಸವನ್ನು ನಾನು ನೋಡುತ್ತಿದ್ದೇನೆ. ಅವನಿಗೆ ಶುಭ ಹಾರೈಸುತ್ತೇನೆ." ಇದೇ ವೇಳೆ, 'ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೇನೆ' ಎಂದು ವಿಜಯ್ ಈ ಹಿಂದೆ ಹೇಳಿದ್ದನ್ನು ಚಂದ್ರಶೇಖರ್ ನೆನಪಿಸಿಕೊಂಡರು.
"ಟಿವಿಕೆ ಪಕ್ಷದ ಗೆಲುವಿನ ಬಗ್ಗೆ ವಿಜಯ್ಗೆ (Vijay) ಕಿಂಚಿತ್ತೂ ಅನುಮಾನವಿರಲಿಲ್ಲ. 'ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೇನೆ' ಎಂಬ ಅವರ ದೃಢ ಸಂಕಲ್ಪವನ್ನು ನಾನು ಕಳೆದ ಎರಡು ವರ್ಷಗಳಿಂದ ನೋಡಿದ್ದೇನೆ. ಇದು ತಮಿಳುನಾಡಿನ ಜನರಿಗೆ ಒಳ್ಳೆಯದಾಗುವ ಐತಿಹಾಸಿಕ ಯಶಸ್ಸು" ಎಂದು ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು. "ನಾನು ನನ್ನ ಸ್ವಂತ ಕಾಲುಗಳ ಮೇಲೆ ನಿಲ್ಲುತ್ತೇನೆ, ಯಾವುದೇ ಮೈತ್ರಿಯನ್ನೂ ಮಾಡಿಕೊಳ್ಳುವುದಿಲ್ಲ" ಎಂದು ವಿಜಯ್ ದೃಢವಾಗಿ ಹೇಳಿದ್ದನು ಎಂದು ತಿಳಿಸಿದರು.
ವಿಜಯ್ ಕಳೆದ 30 ವರ್ಷಗಳಿಂದ ಸಮಾಜಕ್ಕಾಗಿ, ತಮಿಳು ಜನರಿಗಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕೆಂದು ಯೋಚಿಸುತ್ತಿದ್ದರು. ನಿಧಾನವಾಗಿ ಆ ದಾರಿಯಲ್ಲಿ ಸಾಗಿದ್ದಾರೆ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಚಂದ್ರಶೇಖರ್ ಮತ್ತೊಮ್ಮೆ ಒತ್ತಿ ಹೇಳಿದರು.
ತಮಿಳುನಾಡಿನ ಜನರು ನನ್ನ ಮಗನನ್ನು ಕೇವಲ ನಾಯಕನನ್ನಾಗಿ ಮಾತ್ರ ಪ್ರೀತಿಸುತ್ತಿಲ್ಲ. ಪ್ರತಿಯೊಬ್ಬ ಮಹಿಳೆಯೂ ಅವನನ್ನು ತಮ್ಮ ಸ್ವಂತ ಮಗನಂತೆ ನೋಡುತ್ತಾರೆ. ಯುವಕರು ಅವನನ್ನು ತಮ್ಮ ಸಹೋದರ ಎಂದು ಪರಿಗಣಿಸಿದ್ದಾರೆ. ಎಲ್ಲರೂ ಅವನನ್ನು 'ಅಣ್ಣ' ಎಂದು ಪ್ರೀತಿಯಿಂದ ಕರೆಯುತ್ತಾರೆ. ವೃದ್ಧರು ಅವನನ್ನು ತಮ್ಮ ಮೊಮ್ಮಗ ಎಂದು ಭಾವಿಸುತ್ತಾರೆ. ಸಾರ್ವಜನಿಕವಾಗಿ ವಿಜಯ್ ಆ ಮಟ್ಟಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂದು ಎಸ್. ಎ. ಚಂದ್ರಶೇಖರ್ ಹಾಡಿ ಹೊಗಳಿದರು.
PublicNext
04/05/2026 06:42 pm