ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿಯ ಗೆಲುವಿಗೆ ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಕಾರಣ ಎಂದು ಸಚಿವ ಸಂತೋಷ್ ಲಾಡ್ ಗಂಭೀರ ಆರೋಪ ಮಾಡಿದ್ದಾರೆ. "ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ರಿಂದಲೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿಗೆ ಗೆಲುವಾಗಿದೆ" ಎಂದು ಅವರು ನೇರವಾಗಿ ದೂರಿದ್ದಾರೆ.
ಉಪಚುನಾವಣೆ ಫಲಿತಾಂಶದ ಕುರಿತು
ಪಂಚರಾಜ್ಯ ಚುನಾವಣೆ ಹಾಗೂ ಉಪಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಸಚಿವ ಲಾಡ್, "ಉಪಚುನಾವಣೆಯಲ್ಲಿ ನಾವು ನಿರೀಕ್ಷೆಯಂತೆ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಸರ್ಕಾರದ ಜನಪರ ಕಾರ್ಯಕ್ರಮಗಳು, ಕಾರ್ಯಕರ್ತರು ಮತ್ತು ಮುಖಂಡರ ಪರಿಶ್ರಮದಿಂದ ಜನರು ನಮಗೆ ಮತ ನೀಡಿ ಗೆಲ್ಲಿಸಿದ್ದಾರೆ" ಎಂದು ವಿವರಿಸಿದರು.
ಜ್ಞಾನೇಶ್ ಕುಮಾರ್ ವಿರುದ್ಧದ ಆರೋಪಗಳು
ಜ್ಞಾನೇಶ್ ಕುಮಾರ್ ಅವರನ್ನು "ಅಸ್ಸಾಂನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರೀಸ್" ಎಂದು ವ್ಯಂಗ್ಯವಾಡಿದ ಲಾಡ್, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು. "ಪಶ್ಚಿಮ ಬಂಗಾಳದಲ್ಲಿ ಸುಮಾರು 90 ಲಕ್ಷ ಮತಗಳನ್ನು ಅನಗತ್ಯವಾಗಿ ಅಳಿಸಿಹಾಕಲಾಗಿದೆ. ಟಿಎಂಸಿಯನ್ನು ಸೋಲಿಸಲು ವ್ಯವಸ್ಥಿತ ಹುನ್ನಾರ ನಡೆಸಲಾಗಿದೆ. ಆಡಳಿತ ವಿರೋಧಿ ಅಲೆ ಇತ್ತು ಎಂಬುದು ನಿಜವಾದರೂ, ಜ್ಞಾನೇಶ್ ಕುಮಾರ್ ಚುನಾವಣೆ ಆಯೋಗಕ್ಕೆ ಬಂದ ನಂತರ ಬಿಜೆಪಿಯ ಗೆಲುವಿನ ಅಂತರವನ್ನು ಹೆಚ್ಚಿಸಲು ಮುಂದಾಳತ್ವ ವಹಿಸಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.
'ಫ್ರಾಡ್ ಮಾಡಿ ಗೆದ್ದಿದ್ದಾರೆ'
"ಬಿಜೆಪಿಯವರು ತಮ್ಮ ಕೆಲಸದ ಆಧಾರದ ಮೇಲೆ ಮತ ಕೇಳುವ ಬದಲು, ಜ್ಞಾನೇಶ್ ಕುಮಾರ್ ಮೂಲಕ ಮೋಸ ಮಾಡಿ ಗೆದ್ದಿದ್ದಾರೆ. ಅವರಿಗೆ ಶುಭವಾಗಲಿ, ಆದರೆ ಎಲ್ಲರಿಗೂ ಒಂದು ಕಾಲ ಬರುತ್ತದೆ" ಎಂದು ಆಕ್ರೋಶಭರಿತವಾಗಿ ನುಡಿದರು.
PublicNext
06/05/2026 08:01 pm