ಅಮರಾವತಿ: ಪಾರ್ವತೀಪುರಂ ಮನ್ಯಂ ಜಿಲ್ಲೆಯ ವೆಲಗವಲಸ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮಂತ್ರವಾದಿ ಎಂಬ ಸಂಶಯದ ಮೇಲೆ ಯುವಕನೊಬ್ಬನನ್ನು ನಡುರಸ್ತೆಯಲ್ಲೇ ಥಳಿಸಿ, ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟುಹಾಕಲಾಗಿದೆ. ಮಂತ್ರವಾದಿ ಕೆಲಸ ಮಾಡುತ್ತಿದ್ದನೆಂಬ ಸಂಶಯದಿಂದ ಯುವಕನನ್ನು ಮನಬಂದಂತೆ ಥಳಿಸಿ, ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟುಹಾಕಿದ ಈ ಬರ್ಬರ ಕೃತ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಗ್ರಾಮದ ನಿವಾಸಿ ತಾಡಂಗಿ ರಮೇಶ್ (30) ಮತ್ತು ಅವರ ಪತ್ನಿ ಸೃಜನಾ ಅವರಿಗೆ ಎರಡು ವರ್ಷದ ಮಗಳಿದ್ದಾಳೆ. ಗ್ರಾಮದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅಥವಾ ಯಾವುದೇ ಸಮಸ್ಯೆ ಎದುರಾದರೆ, ಅದಕ್ಕೆ ರಮೇಶ್ನ ಮಂತ್ರವಾದವೇ ಕಾರಣ ಎಂದು ಗ್ರಾಮಸ್ಥರು ಬಲವಾಗಿ ಸಂಶಯಿಸುತ್ತಿದ್ದರು.
ಐದು ವರ್ಷಗಳ ಹಿಂದೆಯೂ ರಮೇಶ್ನ ತಂದೆ ಸಾಂಬಯ್ಯ ಕೂಡ ಮಂತ್ರವಾದ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಗ್ರಾಮಸ್ಥರಿಂದ ಬೆದರಿಕೆಗೊಳಗಾಗಿದ್ದರು. ಇದರಿಂದ ಹೆದರಿದ ಸಾಂಬಯ್ಯ ಗ್ರಾಮವನ್ನು ತೊರೆದು ಹೋಗಿದ್ದರು. ಇದೀಗ ಅದೇ ರೀತಿಯ ಆರೋಪವನ್ನು ಮುಂದಿಟ್ಟು ರಮೇಶ್ನ್ನೇ ಗುರಿಯಾಗಿಸಲಾಗಿದೆ.
ಗ್ರಾಮದ ಕೆಲವರು ಸೇರಿ ಸಂಚು ರೂಪಿಸಿ ರಮೇಶ್ನ ಮನೆ ಮೇಲೆ ದಾಳಿ ನಡೆಸಿದರು. ಮನೆಯಲ್ಲಿದ್ದ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದಾಗ, ರಮೇಶ್ ಅನಿವಾರ್ಯವಾಗಿ ಮನೆಯಿಂದ ಹೊರಬಂದರು. ಕೂಡಲೇ ಆತನನ್ನು ದೊಣ್ಣೆಗಳಿಂದ ಮನಬಂದಂತೆ ಥಳಿಸಲಾಯಿತು. ತೀವ್ರ ಗಾಯಗೊಂಡು ಅಪ್ರಜ್ಞಾವಸ್ಥೆಗೆ ತಲುಪಿದ ರಮೇಶ್ನ ಮೇಲೆ ಪೆಟ್ರೋಲ್ ಸುರಿದು, ಗ್ರಾಮಸ್ಥರೆಲ್ಲರೂ ನೋಡುತ್ತಿದ್ದಂತೆಯೇ ಬೆಂಕಿ ಹಚ್ಚಿ ಜೀವಂತವಾಗಿ ಸುಡಲಾಯಿತು.
ಕುಟುಂಬ ಸದಸ್ಯರ ಮಾಹಿತಿ ಮೇರೆಗೆ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ, ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ರಮೇಶ್ನ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬರ್ಬರ ಕೃತ್ಯದಲ್ಲಿ ಭಾಗಿಯಾದ 16 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
PublicNext
03/06/2026 07:58 pm