ತುಮಕೂರು: ಮಧುಗಿರಿ ತಾಲ್ಲೂಕು ಐ ಡಿ ಹಳ್ಳಿ ಹೋಬಳಿ ತುಮ್ಮಲು ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಅಕ್ರಮ ಭೂ ಪರಿವರ್ತನೆ ಮಾಡಿರುವ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ತುಮಕೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಸಾಮಾಜಿಕ ಹೋರಾಟಗಾರ ಹೆಚ್.ಜಿ.ರಮೇಶ್ ಹಾಗೂ ವಿಷ್ಣು ವಿಜಯ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು ಜಿಲ್ಲಾಧಿಕಾರಿಗಳಿಗೆ ಅಕ್ರಮ ಭೂಪರಿವರ್ತನೆ ಕಂಟಕ ತಂದೊಡ್ಡಿದೆ.
ಐ ಡಿ ಹಳ್ಳಿ ಹೋಬಳಿ ತುಮ್ಮಲು ಗ್ರಾಮದ ಸರ್ಕಾರಿ ಜಮೀನಾದ ಸ.ನಂ.22 ರಲ್ಲಿ 20 ಎಕರೆ 31 ಗುಂಟೆ ಹಾಗೂ ಸ.ನಂ.40 ರಲ್ಲಿ 7 ಎಕರೆ 4 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಸರ್ಕಾರಿ ನಿಯಮಾವಳಿ ಗಾಳಿಗೆ ತೂರಿ ಭೂ ಪರಿವರ್ತನೆ ಮಾಡಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಧುಗಿರಿಯ ಹಿಂದಿನ ತಹಶೀಲ್ದಾರ್ ಶಿರೀನ್ ತಾಜ್ ,ಇನ್ನಿತರೆ ಕಂದಾಯ ಅಧಿಕಾರಿಗಳ ವಿರುದ್ಧ ಖಾಸಗಿ ಪಿರ್ಯಾದು ದಾಖಲಿಸಲಾಗಿದೆ, 11 ಇ ನಕ್ಷೆ ಅನುಮೋದನೆ ಇಲ್ಲದೆ ನೋಂದಾವಣೆ ಮಾಡಿಸಿರುವ ಮಧುಗಿರಿ ಸಬ್ ರಿಜಿಸ್ಟ್ರಾರ್ ಸತೀಶ್ ಹಾಗೂ ಕುಣಿಗಲ್ ಸಬ್ ರಿಜಿಸ್ಟ್ರಾರ್ ಆಗಿದ್ದ ಯಶೋಧ ಹಾಗೂ ಇನ್ನಿತರರ ವಿರುದ್ಧವೂ ದೂರು ದಾಖಲಾಗಿದೆ.
ಹಿಂದಿನ ಕಂದಾಯ ಸಚಿವರಾಗಿದ್ದ ಕೃಷ್ಣ ಭೈರೇಗೌಡರು ತುಮಕೂರಿನಲ್ಲಿ ನಡೆಸಿದ್ದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ತುಮ್ಮಲು ಗ್ರಾಮದ ಭೂ ಹಗರಣದ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಪತ್ರಕರ್ತರು ಸಚಿವರ ಗಮನ ಸೆಳೆದಿದ್ದರು,ಈ ಬಗ್ಗೆ ತನಿಖೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದರಾದರೂ ಬಳಿಕ ಈ ಪ್ರಕರಣ ಹಳ್ಳ ಹಿಡಿದಿತ್ತು,ಈಗ ಸಾಮಾಜಿಕ ಹೋರಾಟಗಾರ ರಮೇಶ್ ಖಾಸಗಿ ದೂರು ದಾಖಲಿಸಿ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
PublicNext
07/06/2026 08:29 am