ಮಂಗಳೂರು: ಆರೋಗ್ಯ ಹಾಗೂ ಕುಟುಂಬ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟಿ ಖಾದರ್ ಅವರು ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ರವಿವಾರ ಬೆಳಗ್ಗೆ ಆಗಮಿಸಿದರು. ಮೊದಲಿಗೆ ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್ಗೆ ಭೇಟಿ ನೀಡಿದರು. ಬಳಿಕ ಉಳ್ಳಾಲ ಶ್ರೀ ಭಗವತಿ ಕ್ಷೇತ್ರ, ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಚರ್ಚ್ಗೆ ಭೇಟಿ ನೀಡಿದರು.
ನಂತರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಅವರು ಭೇಟಿ ನೀಡಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅವರಿಗೆ ಅದ್ದೂರಿ ಸ್ವಾಗತ ನೀಡಿತು. ಈ ವೇಳೆ ಕುದ್ರೋಳಿ ಶ್ರೀಗೋಕರ್ಣನಾಥ, ಪರಿವಾರ ದೇವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ದರ್ಶನ ಪಡೆದರು .
ಬಳಿಕ ಮಾಧ್ಯಮದವರು ಕೇಳಿದ ದ. ಕ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಪ್ರಶ್ನೆಗೆ ಸಿಎಂ ಅವರನ್ನು ಕೇಳಿ ಹೇಳುತ್ತೇನೆ ಎಂದು ಉತ್ತರಿಸಿದರು. ಈ ಹಿಂದೆಯೂ ನಾನು ಕೋಲಾರ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ದ. ಕ. ಜಿಲ್ಲೆಗೆ ಬೇರೆ ಸಚಿವರನ್ನು ನೇಮಕ ಮಾಡಿ, ನನಗೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿದ್ದಲ್ಲಿ ನನಗೆ ಆ ಜಿಲ್ಲೆಯ ಸಂಸ್ಕೃತಿಯ ಅನುಭವವಾಗುತ್ತದೆ. ಅಂತಿಮವಾಗಿ ಈ ಬಗ್ಗೆ ಸಿಎಂ ಅವರೇ ತೀರ್ಮಾನ ಮಾಡಲಿದ್ದಾರೆ ಎಂದರು.
ಆರೋಗ್ಯ ಸಚಿವರಾದ ತಕ್ಷಣ ದಿಢೀರ್ ಆಸ್ಪತ್ರೆ ಭೇಟಿ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಯು. ಟಿ.ಖಾದರ್, ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ, ಯಾವ ರೀತಿ ನಡೆಯುತ್ತಿದೆ ಎಂಬುದರ ಸ್ಪಷ್ಟ ಚಿತ್ರಣಕ್ಕೆ ಮಧ್ಯರಾತ್ರಿ ಭೇಟಿ ನೀಡಬೇಕಾಗುತ್ತದೆ. ವೈದ್ಯರು, ಸಿಬ್ಬಂದಿ ಆಸ್ಪತ್ರೆಯಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ತಿಳಿಯುತ್ತದೆ. ಚಿಕಿತ್ಸೆಯ ವ್ಯವಸ್ಥೆ, ಸ್ವಚ್ಛತೆಯ ಬಗ್ಗೆ ಗಮನಕ್ಕೆ ಬರುತ್ತದೆ. ಮೊನ್ನೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಭೆಯನ್ನು ಮಾಡಿದ್ದೇನೆ. ಅವ್ಯವಸ್ಥೆ ಇರುವಲ್ಲಿ ಸರಿಪಡಿಸುವ ವ್ಯವಸ್ಥೆ ಮಾಡುತ್ತೇನೆ. ಇದು ನನ್ನೊಬ್ಬನ ಜವಾಬ್ದಾರಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಗಳೂ ಇದೇ ಮಾದರಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸುತ್ತೇನೆ ಎಂದರು.
ಜನರಿಗೆ ಸೇವೆ ನೀಡುವುದು ನನ್ನ ಮೊದಲ ಆದ್ಯತೆ. ನುರಿತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಇರುವ ಸರ್ಕಾರಿ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ವಹಿಸುವ ವಿಚಾರ ಸರಕಾರದ ಮುಂದಿಲ್ಲ. ಆದರೆ ಉತ್ತಮವಾದ ಆಸ್ಪತ್ರೆಯಿದ್ದು, ಮೂಲಭೂತ ವ್ಯವಸ್ಥೆ ಇದ್ದು, ವೈದ್ಯಕೀಯ ಸಿಬ್ಬಂದಿ, ವೈದ್ಯರ ಕೊರತೆಯಿದ್ದಲ್ಲಿ ಆಸ್ಪತ್ರೆಯು ಖಾಸಗಿ ಆಸ್ಪತ್ರೆಯೊಂದಿಗೆ ಎಂಒಯು ಮಾಡಲಾಗುತ್ತದೆ ಎಂದರು.
PublicNext
07/06/2026 05:32 pm