ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಬರದ ನಾಡಿನ ಭಗೀರಥ ಜಯಚಂದ್ರಗೆ ಸಚಿವ ಸ್ಥಾನ ನೀಡಿ - ಕುಂಚಿಟಿಗ ಸಮುದಾಯದ ಭಾವನಾತ್ಮಕ ಆಗ್ರಹ

ತುಮಕೂರು: ಕುಂಚಿಟಿಗ ಸಮಾಜದ ಏಕೈಕ ಶಾಸಕ, ಹಿರಿಯ ರಾಜಕಾರಣಿ, ಶಿರಾ ಕ್ಷೇತ್ರ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕುಂಚಿಟಿಗ ಸಮಾಜದ ವಿವಿಧ ಸಂಘಗಳ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ. ಶ್ರೀಧರ್, ರಾಜ್ಯದ 25-30 ಲಕ್ಷ ಜನಸಂಖ್ಯೆಯ ಕುಂಚಿಟಿಗ ಸಮಾಜದ ಏಕೈಕ ಶಾಸಕರಾಗಿರುವ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ, ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾದ ಜಯಚಂದ್ರ ಅವರ ಅನುಭವ, ಹಿರಿತನ ಪರಿಗಣಿಸಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಜಯಚಂದ್ರ ಅವರು ಕೇವಲ ರಾಜಕಾರಣಿ ಮಾತ್ರವಲ್ಲದೇ ಕುಂಚಿಟಿಗ ಜನಾಂಗದ ರಾಜಕೀಯ ಅಸ್ತಿತ್ವದ ಸಂಕೇತವಾಗಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದು ಸಮುದಾಯದ ಗೌರವವನ್ನು ಉಳಿಸುವುದರ ಜೊತೆಗೆ ರಾಜ್ಯ ರಾಜಕಾರಣದಲ್ಲಿ ಸಾಮಾಜಿಕ ಸಮತೋಲನವನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಿರುತ್ತದೆ. ಇವರು ನೀರಾವರಿಯ ಬಗ್ಗೆ ನಡೆಸಿದ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದಾಗಿ ಸತತ ಬರದಿಂದ ಬೆಂಡಾಗಿದ್ದ ಬರದ ನಾಡಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿ ಜನ-ಮನದಲ್ಲಿ ಬರದ ನಾಡಿನ ಭಗೀರಥನೆಂಬ ಪಾತ್ರರಾಗಿರುತ್ತಾರೆ. ಈ ಹಿಂದಿನ ಸಿಎಂ ಸಿದ್ಧರಾಮಯ್ಯರವರ ಸರ್ಕಾರದಲ್ಲಿ ಸಚಿವರಾಗಿ ಸುಮಾರು 42ಕ್ಕೂ ಹೆಚ್ಚು ಸಚಿವ ಸಂಪುಟ ಗುರುತರವಾದ ಉಪಸಮಿತಿಗಳಲ್ಲಿ ಅಧ್ಯಕ್ಷರಾಗಿ ಸದಸ್ಯರಾಗಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ವರದಿಗಳನ್ನು ನೀಡುವುದರ ಮೂಲಕ ಸಾರ್ವಜನಿಕವಾಗಿ ಸರ್ಕಾರದ ಮತ್ತು ಪಕ್ಷದ ಘನತೆಯನ್ನು ಹೆಚ್ಚಿಸಿ ಪ್ರಶಂಸೆಗೆ ಪಾತ್ರರಾದ ಮುತ್ಸದ್ದಿ ನಾಯಕ ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷ ಆರ್. ಕಾಮರಾಜ್ ಮಾತನಾಡಿ, ಕುಂಚಿಟಿಗ ಒಕ್ಕಲಿಗ ಜನಾಂಗದ ಕ್ರಿಯಾಶೀಲ ರಾಜಕಾರಣಿ ಹಾಗೂ ಕಳೆದ 5 ದಶಕಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಏಳು ಬಾರಿ ಕಳ್ಳಂಬೆಳ್ಳ ಮತ್ತು ಶಿರಾ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ ಟಿ.ಬಿ. ಜಯಚಂದ್ರ ಅವರು ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇಂತಹ ಹಿರಿಯ ನಾಯಕರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಕುಂಚಿಟಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಜೊತೆಗೆ ಜಯಚಂದ್ರ ಅವರ ಪಕ್ಷನಿಷ್ಠೆಯನ್ನು ಗೌರವಿಸಬೇಕು ಎಂದು ಹೇಳಿದರು.

ಈಗ ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಬರುತ್ತಿದೆ. ಹಿರಿಯೂರಿನಲ್ಲಿ ಕುಂಚಿಟಿಗ ಸಮಾಜದ ಮತದಾರರ ಸಂಖ್ಯೆ ಹೆಚ್ಚಾಗಿದೆ. ಆ ಕ್ಷೇತ್ರದಲ್ಲಿ ಜಯಚಂದ್ರ ಅವರ ಪ್ರಭಾವವೂ ಇದೆ. ಸರ್ಕಾರ ಇವರಿಗೆ ಸಚಿವ ಸ್ಥಾನ ನೀಡದಿದ್ದರೆ ಹಿರಿಯೂರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ಕುಂಚಿಟಿಗರು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದರು.

ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ.ವಿ. ಶಿವರಾಜು, ಖಜಾಂಚಿ ಭಕ್ತರಹಳ್ಳಿ ದೇವರಾಜು, ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ, ವಕೀಲ ಜಿ.ಎಲ್. ನರೇಂದ್ರಬಾಬು, ವಕೀಲರು, ಕೆಂಪೇಗೌಡ ಪಟ್ಟಣ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಶಿವರಾಮಯ್ಯ, ಮುಖಂಡರಾದ ಎಸ್.ಕೆ. ನಾಗರಾಜು, ಜಯಣ್ಣ, ಲಲಿತಾ ಮಲ್ಲಪ್ಪ, ನಾಗರಾಜು, ಶಶಿಧರ್, ಬೆಳ್ಳಾರ ರವಿ, ಗೋ.ಮು. ನಾಗರಾಜು, ನಿವೃತ್ತ ಪ್ರಾಚಾರ್ಯ ಮರಳಯ್ಯ, ಅಶೋಕ್, ಲಕ್ಷ್ಮೀಪ್ರಸಾದ್, ಬಸಂತನಹಳ್ಳಿ ರಾಜು, ಮಧು ಜೀರಿಗೆ, ಮದ್ದೆವಳ್ಳಿ ನಾಗಣ್ಣ, ಆರ್.ಟಿ. ನಾರಾಯಣಪ್ಪ, ಹೆಂದೊರೆ ಮೋಹನ್, ಗೌಡಗೆರೆ ವಸಂತ ಮೊದಲಾದವರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

09/06/2026 08:45 am

Cinque Terre

980

Cinque Terre

0

ಸಂಬಂಧಿತ ಸುದ್ದಿ